ದೇಶ

ಸಂಸತ್ ಭದ್ರತಾ ಲೋಪ: ಆರೋಪಿ ಮಹೇಶ್ ಕುಮಾವತ್ ಪೊಲೀಸ್ ಕಸ್ಟಡಿ ಜನವರಿ 5ರವರೆಗೆ ವಿಸ್ತರಣೆ

Ramyashree GN

ನವದೆಹಲಿ: ಡಿಸೆಂಬರ್ 13ರ ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಹೇಶ್ ಕುಮಾವತ್ ಅವರ ಪೊಲೀಸ್ ಕಸ್ಟಡಿಯನ್ನು ಶನಿವಾರ ಇಲ್ಲಿನ ನ್ಯಾಯಾಲಯವು ಜನವರಿ 5 ರವರೆಗೆ ವಿಸ್ತರಿಸಿದೆ.

ದೆಹಲಿ ಪೊಲೀಸರು ಸಲ್ಲಿಸಿದ ಅರ್ಜಿಯ ಮೇರೆಗೆ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಕುಮಾವತ್ ಅವರ ಕಸ್ಟಡಿಯನ್ನು ವಿಸ್ತರಿಸಿದರು. ಸಂಪೂರ್ಣ ಷಡ್ಯಂತ್ರವನ್ನು ಬಯಲಿಗೆಳೆಯಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಆರೋಪಿಗಳು 'ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಬಯಸಿದ್ದರು, ಇದರಿಂದಾಗಿ ಅವರು ತಮ್ಮ ಅನ್ಯಾಯದ ಮತ್ತು ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಬಹುದು ಎಂದುಕೊಂಡಿದ್ದರು' ಎಂದು ಪ್ರಾಸಿಕ್ಯೂಟರ್ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.

'ದಾಳಿಯ ಹಿಂದಿನ ನಿಜವಾದ ಉದ್ದೇಶದೊಂದಿಗೆ ಶತ್ರು ದೇಶ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗಿನ ಆತನ ಸಂಬಂಧದ ಕುರಿತು ಕಂಡುಹಿಡಿಯಲು' ಬಂಧನದ ಅಗತ್ಯವಿದೆ ಎಂದು ಪ್ರಾಸಿಕ್ಯೂಟರ್ ಹೇಳಿದರು.

ದೆಹಲಿ ಪೊಲೀಸರ ಪ್ರಕಾರ, ಕುಮಾವತ್ ಗುರುವಾರ ರಾತ್ರಿ ಸಹ-ಆರೋಪಿ ಲಲಿತ್ ಝಾ ಅವರೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಬಳಿಕ ಇಬ್ಬರನ್ನೂ ವಿಶೇಷ ಸೆಲ್‌ಗೆ ಹಸ್ತಾಂತರಿಸಲಾಯಿತು. ಅಂದಿನಿಂದ ಅವರ ವಿಚಾರಣೆ ನಡೆಸಲಾಗುತ್ತಿದೆ. 
ಆರೋಪಿಗಳು ರಚಿಸಿದ ಭಗತ್ ಸಿಂಗ್ ಫ್ಯಾನ್ ಕ್ಲಬ್ ಪೇಜ್‌ನ ಈಗ ಅಳಿಸಲಾದ ಪುಟದ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುಮಾವತ್ ಅವರನ್ನು ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂಧೆ ಮತ್ತು ನೀಲಂ ದೇವಿ ಅವರ ಕಸ್ಟಡಿಯನ್ನು ಜನವರಿ 5 ರವರೆಗೆ ನ್ಯಾಯಾಲಯ ಗುರುವಾರ ವಿಸ್ತರಿಸಿದೆ. ಝಾ ಅವರ ಪೊಲೀಸ್ ಕಸ್ಟಡಿಯನ್ನು ನ್ಯಾಯಾಲಯವು ಜನವರಿ 5 ರವರೆಗೆ ಶುಕ್ರವಾರ ವಿಸ್ತರಿಸಿದೆ.

SCROLL FOR NEXT