ದೇಶ

ಅಯೋಧ್ಯೆಯಲ್ಲಿ ರಾಮಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ: ನಟ ಯಶ್, ಪ್ರಭಾಸ್, ರಿಷಬ್ ಶೆಟ್ಟಿಗೆ ಆಹ್ವಾನ

Shilpa D

ಮುಂಬೈ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಲೋಕಾರ್ಪಣೆಗೆ ರಾಮಮಂದಿರ ಸಜ್ಜುಗೊಂಡಿದೆ. ಜನವರಿ 22 ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಮುಖ ರಾಜಕೀಯ ನಾಯಕರು, ಕ್ರೀಡೆ ಹಾಗೂ ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ.

ಅದರಂತೆ ಕನ್ನಡದ ಖ್ಯಾತ ನಟರಾದ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಡಿವೈನ್‌ ಸ್ಟಾರ್ ರಿಷಬ್‌ ಶೆಟ್ಟಿಗೆ ಆಹ್ವಾನ ನೀಡಲಾಗಿದೆ. ಈ ನಡುವೆ ರಣಬೀರ್ ಕಪೂರ್, ಅಲಿಯಾ ಭಟ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಭಾಸ್  ಸೇರಿದಂತೆ ಚಿತ್ರರಂಗದ ಅನೇಕರಿಗೆ ಆಹ್ವಾನ ನೀಡಲಾಗಿದೆ.

ಬಾಲಿವುಡ್ ಬಾದ್‌ಷಾ ಅಮಿತಾಭ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್, ನಟ ಅನುಪಮ್ ಖೇರ್, ಅಕ್ಷಯ್ ಕುಮಾರ್, ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ತೆಲುಗು ನಟ ಚಿರಂಜೀವಿ, ಮೋಹನ್ ಲಾಲ್, ಧನುಷ್ ಮತ್ತು ಕನ್ನಡದ ರಿಷಬ್ ಶೆಟ್ಟಿ ಅವರನ್ನು ಈ ಹಿಂದೆಯೇ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಉದ್ಯಮಿಗಳಾದ ಮುಕೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದಂತೆ 7,000 ಗಣ್ಯರನ್ನು ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, ದೇಶದ ವಿವಿಧ ಭಾಗಗಳಿಂದ 4,000 ಸಂತರು ಮತ್ತು ಸಾಧುಗಳು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮ ಮಂದಿರ ಚಳವಳಿಯ ಭಾಗವಾಗಿದ್ದ ‘ಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಗಳನ್ನು ಈಗಾಗಲೇ ಕಳುಹಿಸಿದೆ. ಜತೆಗೆ ಚಿತ್ರರಂಗದ ಗಣ್ಯರಿಗೂ ಆಹ್ವಾನ ನೀಡಲಾಗುತ್ತಿದೆ.

2024 ಜನವರಿ 22ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಪ್ರಸಿದ್ಧ ಟಿ.ವಿ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರಧಾರಿ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ.

ಅಯೋಧ್ಯೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ 50 ಕರಸೇವಕರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಾರಾಣಸಿಯ 21 ಪಂಡಿತರ ತಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯ ನಡೆಸಲಿದೆ. ಖ್ಯಾತ ವೈದಿಕ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ತಂಡವನ್ನು ಮುನ್ನಡೆಸಲಿದ್ದು, ಅವರ ಇಬ್ಬರು ಪುತ್ರರಾದ ಪಂಡಿತ್ ಜೈಕೃಷ್ಣ ದೀಕ್ಷಿತ್ ಮತ್ತು ಸುನಿಲ್ ದೀಕ್ಷಿತ್ ಮತ್ತು ಕಾಶಿಯ ಇತರ 18 ಪಂಡಿತರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ

SCROLL FOR NEXT