ದೇಶ

ಡಿಸ್ಕಾಂ ಮಂಡಳಿಗಳಿಗೆ ನೇಮಕ: ಆಮ್ ಆದ್ಮಿ ಪಕ್ಷದ ನಾಮನಿರ್ದೇಶಿತರನ್ನು ವಜಾಗೊಳಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್ 

Srinivas Rao BV

ನವದೆಹಲಿ: ದೆಹಲಿಯಲ್ಲಿ ವಿದ್ಯುತ್ ಡಿಸ್ಕಾಮ್ ಗಳ ಮಂಡಳಿಗಳಿಗೆ ನಾಮನಿರ್ದೇಶನಗೊಂಡಿದ್ದ ಆಮ್ ಆದ್ಮಿ ಪಕ್ಷದ ನಾಯಕರನ್ನು ಲೆಫ್ಟಿನೆಂಟ್ ಗೌರ್ನರ್ ವಜಾಗೊಳಿಸಿದ್ದು, ಆ ಸ್ಥಾನಕ್ಕೆ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಎಂದು ಗೌರ್ನರ್ ಕಚೇರಿ ಮೂಲಗಳಿಂದ ತಿಳಿದುಬಂದಿದೆ. 

ಆಮ್ ಆದ್ಮಿ ಪಕ್ಷದ ವಕ್ತಾರರಾದ ಜಾಸ್ಮೀನ್ ಶಾ, ಆಪ್ ಸಂಸದ ಎನ್ ಡಿ ಗುಪ್ತಾ ಅವರ ಪುತ್ರ ನವೀನ್ ಗುಪ್ತಾ ಹಾಗೂ ಇನ್ನೂ ಇತರ ಖಾಸಗಿ ವ್ಯಕ್ತಿಗಳನ್ನು ಸರ್ಕಾರದ ನಾಮನಿರ್ದೇಶಿತರೆಂದು ಅಕ್ರಮವಾಗಿ ನೇಮಕ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. 

ದೆಹಲಿಯ ಆಡಳಿತಾರೂಢ ಪಕ್ಷ ಆಪ್ ಲೆಫ್ಟಿನೆಂಟ್ ಗವರ್ನರ್ ಆದೇಶವನ್ನು ಅಕ್ರಮ ಹಾಗೂ ಅಸಾಂವಿಧಾನಿಕ ಎಂದು ಆರೋಪಿಸಿದ್ದು ಇಂತಹ ಆದೇಶವನ್ನು ಹೊರಡಿಸಲು ಗವರ್ನರ್ ಗೆ ಅಧಿಕಾರವೇ ಇಲ್ಲ ಎಂದು ಹೇಳಿದೆ. 

ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮಾಹಿತಿಯ ಪ್ರಕಾರ, ಹಣಕಾಸು ಕಾರ್ಯದರ್ಶಿ, ಇಂಧನ ಕಾರ್ಯದರ್ಶಿ ಹಾಗೂ ದೆಹಲಿ ಟ್ರಾನ್ಸ್ಕೋದ ಎಂಡಿ ಡಿಸ್ಕಾಮ್ ಗಳ ಮಂಡಳಿಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. 

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶಾ, ಗುಪ್ತಾ ಹಾಗೂ ಇನ್ನೂ ಇತರ ಖಾಸಗಿ ವ್ಯಕ್ತಿಗಳನ್ನು ಬಿವೈಪಿಎಲ್, ಬಿಆರ್ ಪಿಎಲ್, ಟಿಪಿಡಿಡಿಎಲ್ ಗಳಿಗೆ ಅಕ್ರಮವಾಗಿ ಸರ್ಕಾರದ ನಾಮನಿರ್ದೇಶನ ಮಾಡಲಾಗಿದೆ ಎಂದು ಗನರ್ವರ್ ಕಚೇರಿ ಹೇಳಿದೆ.
 
ಆದರೆ ಈ ಆರೋಪಗಳನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಕ್ಷ, ಚುನಾಯಿತ ಸರ್ಕಾರಕ್ಕೆ ವಿದ್ಯುತ್ ಗೆ ಸಂಬಂಧಿಸಿದ ಆದೇಶಗಳನ್ನು ಪ್ರಕಟಿಸುವುದಕ್ಕೆ ಅಧಿಕಾರವಿದೆ ಎಂದು ಸಮರ್ಥಿಸಿಕೊಂಡಿದ್ದು, ಲೆಫ್ಟಿನೆಂಟ್ ಗವರ್ನರ್ ಸುಪ್ರೀಂ ಕೋರ್ತ್ ನ ಎಲ್ಲಾ ಆದೇಶಗಳನ್ನು ಹಾಗೂ ಸಂವಿಧಾನವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿದೆ.

SCROLL FOR NEXT