ಶಿಲ್ಲಾಂಗ್: ಪ್ರಧಾನಿ ವಿದೇಶಕ್ಕೆ ಹೋದಾಗಲೆಲ್ಲಾ ಸಂಘಟಿತರಿಗೆ ಗಿಫ್ಟ್ ಸಿಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಅದಾನಿ ಗುಂಪಿನೊಂದಿಗಿನ ಸಂಬಂಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ ಏಲ್ಲೇ ಹೋದರೂ ಅದಾನಿಗೆ ಗಿಫ್ಟ್ ಸಿಗುತ್ತದೆ ಎಂದು ಹೇಳುವ ಮೂಲಕ ಆ ರಾಷ್ಟ್ರಗಳಲ್ಲಿನ ಬಂದರುಗಳಿಂದ ಹಿಡಿದು ಇಂಧನ ವಲಯದಲ್ಲಿನ ಗುತ್ತಿಗೆ ವಿಚಾರವನ್ನು ಉಲ್ಲೇಖಿಸಿದರು.
ಅದಾನಿ ಸಮೂಹ ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ ಪ್ರಧಾನಿಗೆ ಆಪ್ತವಾಗಿರುವುದರಿಂದ ವ್ಯವಹಾರ ಸಲಿಸಲಾಗಿ ನಡೆಯುತ್ತದೆ ಎಂದು ಹೇಳಿದ ರಾಹುಲ್ ಗಾಂಧಿ, ಈ ವಿಷಯವಾಗಿ ಲೋಕಸಭೆಯಲ್ಲಿ ತಮ್ಮ ಭಾಷಣವನ್ನು ಟಿವಿ ಚಾನೆಲ್ ಗಳು ಮತ್ತು ಪತ್ರಿಕೆಗಳು ಸರಿಯಾಗಿ ವರದಿ ಮಾಡಲಿಲ್ಲ. ಮಾಧ್ಯಮಗಳು ಪ್ರಧಾನಿಯ ಪ್ರಬಲ ಮತ್ತು ಆಪ್ತ ಸಹಾಯಕರ ಕೈಯಲ್ಲಿವೆ ಎಂದು ಆರೋಪಿಸಿದರು.
ಒಬ್ಬ ಉದ್ಯಮಿ ಕೆಲವೇ ವರ್ಷಗಳಲ್ಲಿ 609 ನೇ ಸ್ಥಾನದಿಂದ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಅದಾನಿಯನ್ನು ಹೆಸರಿಸದೆ ಹೇಳಿದ ರಾಹುಲ್ ಗಾಂಧಿ, ಅವರು (ಅದಾನಿ) ಬಂದರುಗಳು, ವಿಮಾನ ನಿಲ್ದಾಣಗಳನ್ನು ಹೊಂದಿದ್ದಾರೆ.ನಿರ್ಮಾಣ ಕಾಮಗಾರಿ ಮಾಡುತ್ತಾರೆ; ರಕ್ಷಣಾ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಾರೆ ಹಿಮಾಚಲ ಪ್ರದೇಶದಲ್ಲಿ ಸೇಬು ವ್ಯಾಪಾರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೇಂದ್ರದಲ್ಲಿನ ವ್ಯಾಪಕ ಭ್ರಷ್ಟಾಚಾರದ ಪ್ರಮಾಣ ಬಹುಶಃ ಭಾರತೀಯ ಇತಿಹಾಸದಲ್ಲಿ ಎಂದಿಗೂ ಕಂಡುಬಂದಿಲ್ಲ ಎಂದು ರಾಹುಲ್ ಟೀಕಿಸಿದರು.