ದೇಶ

ಪ್ರಧಾನಿ ಮೋದಿಗೆ ಅರವಿಂದ್ ಕೇಜ್ರಿವಾಲ್ ಎಂದರೆ ಭಯ: ಆಮ್ ಆದ್ಮಿ ಪಕ್ಷ

Manjula VN

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಯ ಎಂದು ಆಮ್ ಆದ್ಮಿ ಪಕ್ಷ ಭಾನುವಾರ ಹೇಳಿದೆ.

ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಕೇಂದ್ರ ತನಿಖಾ ದಳ (ಸಿಬಿ)ದ ಎದುರು ವಿಚಾರಣೆಗೆ ಹಾಜರಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷ, ಪ್ರಧಾನಿ ಮೋದಿಯವರಿಗೆ ಇಂದು ಅರವಿಂದ ಕೇಜ್ರಿವಾಲ್ ಎಂದರೆ ಭಯಪಡುತ್ತಿದ್ದಾರೆ. ಹೀಗಾಗಿಯೇ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ನಮ್ಮ ಕೌನ್ಸಿಲರ್‌ಗಳು ಮತ್ತು ಶಾಸಕರನ್ನು ಬಿಜೆಪಿಯ ಪೊಲೀಸರು ಬಂಧಿಸಿದ್ದಾರೆ. ಆದರೆ, ನಾವು ದೇಶಕ್ಕಾಗಿ ಒಂದಲ್ಲ, ಸಾವಿರ ಬಾರಿಯಾದರೂ ಬಂಧನಕ್ಕೊಳಗಾಗಲು ಸಿದ್ಧರಿದ್ದೇವೆಂದು ಹೇಳಿದೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿಯ ಪರಿಸರ ಸಚಿವ ಮತ್ತು ಎಎಪಿ ನಾಯಕ ಗೋಪಾಲ್ ರೈ ಅವರು, ಸಿಸೋಡಿಯಾ ಅವರನ್ನು ಬಂಧಿಸಲು ಹೊರಟಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.

ಸಿಸೋಡಿಯಾ ಅವರೊಂದಿಗೆ ರಾಜ್ ಘಾಟ್‌ಗೆ ಭೇಟಿ ನೀಡುವುದನ್ನು ತಡೆಯಲು ಕೆಲ ಎಎಪಿ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. "ಮೋದಿ ಅವರು ಕೇಜ್ರಿವಾಲ್ ಬಗ್ಗೆ ಬಹಳ ಹೆದರುವುದನ್ನು ನಿಲ್ಲಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.

SCROLL FOR NEXT