ದೇಶ

ಶ್ರೀನಗರದಲ್ಲಿ ಜನವರಿ 30 ರಂದು ರಾಹುಲ್ ಗಾಂಧಿಯಿಂದ ರಾಷ್ಟ್ರಧ್ವಜಾರೋಹಣ

Lingaraj Badiger

ನವದೆಹಲಿ: ಭಾರತ್ ಜೋಡೋ ಯಾತ್ರೆಯು ತನ್ನ ಮೊದಲ ಹಂತದಲ್ಲಿ ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಸಾಗಿದ್ದು, ಪ್ರಸ್ತುತ ಚಳಿಗಾಲದ ವಿರಾಮ ತೆಗೆದುಕೊಂಡಿದೆ. ಜನವರಿ 3 ರಂದು ದೆಹಲಿಯಿಂದ ಎರಡನೇ ಹಂತದ ಯಾತ್ರೆ ಪುನರಾರಂಭವಾಗಲಿದ್ದು, ಜನವರಿ 30 ರಂದು ಶ್ರೀನಗರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಸಮಾಪ್ತಿಯಾಗಲಿದೆ.

ಇಂದು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯ ಗಾಂಧಿ ಮಂಟಪದಿಂದ ದೆಹಲಿಯ ಕೆಂಪು ಕೋಟೆಯವರೆಗೆ 3,122 ಕಿ.ಮೀ ಕ್ರಮಿಸಿದೆ ಎಂದರು.

108 ದಿನಗಳಲ್ಲಿ, ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ 49 ಜಿಲ್ಲೆಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಸಾಗಿ ಬಂದಿದೆ.

ಯಾತ್ರೆಯು ಜನವರಿ 3 ರಂದು ದೆಹಲಿಯಿಂದ ಪುನರಾರಂಭವಾಗಲಿದ್ದು, ಜನವರಿ 5 ರವರೆಗೆ ಉತ್ತರ ಪ್ರದೇಶ, ಜನವರಿ 6 ರಿಂದ 10 ರವರೆಗೆ ಹರಿಯಾಣ, ಜನವರಿ 11 ರಿಂದ 20 ರವರೆಗೆ ಪಂಜಾಬ್ ಮತ್ತು ಜನವರಿ 19 ರಂದು ಹಿಮಾಚಲ ಪ್ರದೇಶದಲ್ಲಿ ಒಂದು ದಿನ ಯಾತ್ರೆ ನಡೆಯಲಿದೆ ಎಂದರು.

ಯಾತ್ರೆಯು ಜನವರಿ 20 ರ ಸಂಜೆ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಲಿದ್ದು, ಜನವರಿ 30 ರಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ಅವರಿಂದ ಧ್ವಜಾರೋಹಣದೊಂದಿಗೆ ಕೊನೆಗೊಳ್ಳಲಿದೆ” ಎಂದು ವೇಣುಗೋಪಾಲ್ ಹೇಳಿದರು.

SCROLL FOR NEXT