ದೇಶ

ತನಗೆ ಜೀವ ಬೆದರಿಕೆ ಇದೆ ಎಂದು ಗನ್ ಲೈಸೆನ್ಸ್ ಪಡೆದ ನೂಪುರ್ ಶರ್ಮಾ

Lingaraj Badiger

ನವದೆಹಲಿ: ಕಳೆದ ವರ್ಷ ಟಿವಿ ಚರ್ಚೆಯ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಈಗ ತಮಗೆ ಜೀವ ಬೆದರಿಕೆ ಇದೆ ಎಂಬ ಕಾರಣ ನೀಡಿ ಗನ್ ಲೈಸೆನ್ಸ್ ಪಡೆದುಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.

ಆತ್ಮರಕ್ಷಣೆಗಾಗಿ ನೂಪುರ್ ಶರ್ಮಾ ಅವರಿಗೆ ಗನ್ ಪರವಾನಗಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಟಿವಿ ಚರ್ಚೆಯ ಸಂದರ್ಭದಲ್ಲಿ, ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ನಂತರ ಬಿಜೆಪಿ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಿತ್ತು.

ಗನ್ ಪರವಾನಗಿ ನೀಡುವಂತೆ ಇತ್ತೀಚೆಗೆ ದೆಹಲಿ ಪೊಲೀಸರಿಗೆ ಮನವಿ ಸಲ್ಲಿಸಿದ್ದ ನೂಪುರ್ ಶರ್ಮಾ, ತನ್ನ ಜೀವಕ್ಕೆ ಅಪಾಯವಿದೆ ಮತ್ತು ಆತ್ಮರಕ್ಷಣೆಗಾಗಿ 24 ಗಂಟೆಯೂ ತನಗೆ ಗನ್ ಅಗತ್ಯವಿದೆ ಎಂದು ಹೇಳಿದ್ದರು. ಪೊಲೀಸ್ ಗನ್ ಪರವಾನಗಿ ಘಟಕವು ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡು ಗನ್ ಲೈಸೆನ್ಸ್ ನೀಡಿದೆ.

SCROLL FOR NEXT