ಕೊಚ್ಚಿ: ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದ ಅರವಣ ಪ್ರಸಾದ ಮಾರಾಟ ಹಾಗೂ ತಯಾರಿಕೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ.
ಪ್ರಸಾದಕ್ಕೆ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯವು, ಪ್ರಸಾದ ಮಾರಾಟ ಮಾಡುವುದು ಬೇಡ ಎಂದು ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಅರ್ಜಿ ಸಲ್ಲಿಸಿದ ಹಿನ್ನೆಲೆ ಹೈ ಕೋರ್ಟ್ ಪರೀಕ್ಷೆಗೆ ಆದೇಶ ನೀಡಿತ್ತು.
ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ಪರೀಕ್ಷೆಗಳನ್ನು ಕಳೆದ ವಾರ ನಡೆಸಲಾಗಿತ್ತು. ಇದರಂತೆ ತಿರುವನಂತಪುರದ ರಾಜ್ಯ ಆಹಾರ ಸುರಕ್ಷಾ ಪ್ರಾಧಿಕಾರದ ಲ್ಯಾಬ್ ಮತ್ತು ಕೊಚ್ಚಿಯಲ್ಲಿರುವ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಲ್ಯಾಬ್ಗಳಲ್ಲಿ ಅರವಣ ಪಾಯಸಂ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಮಿತಿ ಮೀರಿದ ಕೀಟನಾಶಕದ ಅಂಶ ಪತ್ತೆಯಾಗಿತ್ತು.
ಇದನ್ನೂ ಓದಿ: ಶಬರಿಮಲೆ ದೇವಸ್ಥಾನದೊಳಗೆ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಫೋಟೋಗಳನ್ನು ಭಕ್ತರು ತರಬಾರದು: ಕೇರಳ ಹೈಕೋರ್ಟ್
ಲ್ಯಾಬ್ಗಳ ಪರೀಕ್ಷಾ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ವರದಿ ಪರಿಶೀಲಿಸಿದ ನ್ಯಾಯಾಲಯವು ಪರೀಕ್ಷೆಗೆ ಒಳಪಡಿಸಿದ ಬ್ಯಾಚ್ನ ಪ್ರಸಾದ ವಿತರಣೆ ಮಾಡಬಾರದು ಎಂದು ಕೋರ್ಟ್ ದೇವಸ್ವಂ ಬೋರ್ಡ್ಗೆ ಸೂಚನೆ ನೀಡಿದೆ.
ಇದೀಗ ಈ ಬಗ್ಗೆ ನಿರ್ಧಾರ ಕೈಗೊಂಡಿರುವ ದೇವಸ್ವಂ ಮಂಡಳಿ, 'ಸದ್ಯಕ್ಕೆ ಎಲ್ಲಾ ಯಂತ್ರಗಳನ್ನು ಸ್ವಚ್ಛಗೊಳಿಸಿ ಏಲಕ್ಕಿ ಇಲ್ಲದೆ 'ಪಾಯಸ' ಮಾಡುತ್ತೇವೆ. ಗುರುವಾರದಿಂದ ನಾವು ಏಲಕ್ಕಿ ರಹಿತ ಪಾಯಸ ವಿತರಿಸುತ್ತೇವೆ ಮತ್ತು ಸಾವಯವ ಏಲಕ್ಕಿಯನ್ನು ಸಂಗ್ರಹಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ' ಎಂದು ತಿಳಿಸಿದೆ.
ತಿರುಪತಿಯ ಲಡ್ಡು, ಪಳನಿಯ ಪಂಚಾಮೃತ ಹೇಗೆ ಖ್ಯಾತಿ ಪಡೆದಿವೆಯೋ ಅದೇ ಮಟ್ಟದ ಪ್ರಸಿದ್ಧಿ ಯನ್ನು ಶಬರಿಮಲೆ ಕ್ಷೇತ್ರದ ಪ್ರಸಾದ ಅರಾವಣಂ ಕೂಡ ಪಡೆದುಕೊಂಡಿದೆ. ಅಕ್ಕಿ, ಬೆಲ್ಲ, ತುಪ್ಪ ಹಾಗೂ ಏಲಕ್ಕಿ ಬಳಸಿ ಮಾಡುವ ಈ ಅರವಣಂ ಪ್ರಸಾದ ಶಬರಿಮಲೆ ಕ್ಷೇತ್ರದ ವಿಶಿಷ್ಠ ಪ್ರಸಾದವಾಗಿ ಪ್ರಸಿದ್ದಿ ಪಡೆದಿದೆ.