ದೇಶ

ದೆಹಲಿ ಸಾರ್ವಜನಿಕ ಸೇವಾ ಆಯೋಗವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳುವುದು ಅಪಾಯಕಾರಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Sumana Upadhyaya

ನವದೆಹಲಿ: ದೆಹಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವಜನಿಕ ಸೇವಾ ಆಯೋಗ(PSC)ಇರುವುದಿಲ್ಲ ಎಂಬ ಕೇಂದ್ರ ಸರ್ಕಾರದ ಪ್ರತಿಪಾದನೆ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ವ್ಯಾಖ್ಯಾನಿಸಿದೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ ಸಾರ್ವಜನಿಕ ಸೇವಾ ಆಯೋಗವನ್ನು ಹೊಂದಿರುವಾಗ ದೆಹಲಿ ಸೇರಿದಂತೆ ಬೇರೆ ಕೇಂದ್ರಾಡಳಿತ ಪ್ರದೇಶಗಳಿಗೆ ಏಕಿಲ್ಲ ಎಂದು ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್, ದೆಹಲಿಗೆ ಪಿಎಸ್ ಸಿ ಬೇಕಿಲ್ಲ ಎಂದು ಹೇಳುವುದು ಅಪಾಯಕಾರಿ ಎಂದು ಬಣ್ಣಿಸಿದೆ.

ಅಸಮರ್ಥ ಅಧಿಕಾರಿಗಳನ್ನು ವರ್ಗಾಯಿಸಲು GNCTD-Government of National Capital territory Department) (National Capital Territory-NCT ದೆಹಲಿ ಸರ್ಕಾರ) ಮೇಲಿನ ನಿರ್ಬಂಧವು ಕ್ರಿಯಾತ್ಮಕ ನಿಯಂತ್ರಣವನ್ನು ದುರ್ಬಲಗೊಳಿಸುತ್ತದೆಯೇ ಎಂದು ಪೀಠವು ಕೇಳಿದೆ. ಇದರಲ್ಲಿ ಇನ್ನೂ ಒಂದು ವಿಷಯವಿದೆ, ಅಧಿಕಾರಿಯೊಬ್ಬರು ತೃಪ್ತಿಕರವಾಗಿ ಕಾರ್ಯನಿರ್ವಹಿಸದಿದ್ದರೆ, ಅವರು ಅಧಿಕಾರಿಗಳನ್ನು ಬದಲಾಯಿಸಲು ಸಹ ಸಾಧ್ಯವಿರುವುದಿಲ್ಲ, ಹಾಗಿರುವಾಗ ಅದು ಕಾರ್ಯಕಾರಿ ನಿಯಂತ್ರಣವನ್ನು ದುರ್ಬಲಗೊಳಿಸಿದಂತಾಗುವುದಿಲ್ಲವೇ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಪ್ರಶ್ನೆ ಮಾಡಿದೆ.

ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ಕೇಂದ್ರಾಡಳಿತ ಪ್ರದೇಶಗಳ ವಿಚಾರದಲ್ಲಿ ಸೇವಾ ಆಯೋಗವು ಕೇಂದ್ರ ಸಾರ್ವಜನಿಕ ಸೇವಾ ಆಯೋಗ(UPSC) ಆಗಿರುತ್ತದೆ. ಜಿಎನ್ ಸಿಟಿಡಿಗೆ ಯಾವುದೇ ಅಧಿಕಾರವಿರುವುದಿಲ್ಲ ಎಂಬ ವಾದವನ್ನು ತಳ್ಳಿಹಾಕಿದ ಅವರು ಕಾರ್ಯನಿರ್ವಹಣೆ ನಿಯಂತ್ರಣ ಸ್ಟೀರ್, ಕ್ಲಚ್ , ಗೇರ್ ಎಲ್ಲವೂ ಜಿಎನ್ ಸಿಟಿಡಿ(GNCTD)ಯಲ್ಲಿರುತ್ತದೆ ಎಂದರು.

ಲೆಫ್ಟಿನೆಂಟ್ ಗವರ್ನರ್ ವಿರುದ್ಧ ದೆಹಲಿಯಲ್ಲಿ ಆಪ್ ಸರ್ಕಾರದ ಪ್ರತಿಭಟನೆಯನ್ನು ಟೀಕಿಸಿದ ಸಾಲಿಸಿಟರ್ ಜನರಲ್, ಸುಪ್ರೀಂ ಕೋರ್ಟ್ ಮುಂದೆ ನಾಟಕಗಳೆಲ್ಲ ನಡೆಯುವುದಿಲ್ಲ. ಕೆಲವೊಂದು ವಿಚಾರಗಳ ಮಧ್ಯೆ ಕೆಲವು ಘಟನೆಗಳು ನಡೆಯುತ್ತವೆ. ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಇಡೀ ಜಗತ್ತು ನೋಡುತ್ತಿದೆ. ಇದು ಇಡೀ ದೇಶಕ್ಕೆ ಮುಜುಗರದ ಸಂಗತಿ ಎಂದರು. 

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ಕೋರ್ಟ್ ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಎ ಎಂ ಸಿಂಘ್ವಿ, ಕೇಂದ್ರಾಡಳಿತ ಪ್ರದೇಶ ಮತ್ತು ಸಾರ್ವಜನಿಕ ಸೇವಾ ಆಯೋಗವೆಂಬ ಪರಿಕಲ್ಪನೆಗಳು ಪರಸ್ಪರ ವಿಶಿಷ್ಟವಾಗಿದೆ ಎಂದರು.

SCROLL FOR NEXT