ದೇಶ

ನನಗಿರುವುದು ಒಂದೇ ಕನಸು: ಕೆಸಿಆರ್ ನೇತೃತ್ವದ ವಿಪಕ್ಷಗಳ ರ‍್ಯಾಲಿ ಬಳಿಕ ನಿತೀಶ್ ಬಿಚ್ಚಿಟ್ಟ ಮನದಾಳದ ಮಾತು...

Srinivas Rao BV

ಪಾಟ್ನ: ತೆಲಂಗಾಣದಲ್ಲಿ ಕೆಸಿಆರ್ ನೇತೃತ್ವದಲ್ಲಿ ರ‍್ಯಾಲಿ ನಡೆದ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 

ನನಗೆ ಒಂದೇ ಒಂದು ಕನಸಿದೆ, ಅದು ತನಗಾಗಿ ಅಲ್ಲ, ಬದಲಾಗಿ ವಿಪಕ್ಷಗಳ ನಾಯಕರು ಒಗ್ಗಟ್ಟಾಗಿ ಮುನ್ನಡೆಯುವುದೇ ನನ್ನ ಕನಸಾಗಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ತೆಲಂಗಾಣದ ಖಮ್ಮಮ್ ನಲ್ಲಿ ಕೆಸಿಆರ್ ನೇತೃತ್ವದಲ್ಲಿ ಪ್ರಮುಖ ವಿಪಕ್ಷಗಳ ನಾಯಕರು ಭಾಗವಹಿಸಿದ್ದರ ಬೆನ್ನಲ್ಲೇ ನಿತೀಶ್ ಕುಮಾರ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
 
ಈ ರ‍್ಯಾಲಿಗೆ ನೀವೇ ಹೋಗಿರಲಿಲ್ವಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ನಿತೀಶ್ ಕುಮಾರ್, ನನಗೆ ಕೆಸಿಆರ್ ಅವರ ರ‍್ಯಾಲಿ ಬಗ್ಗೆ ತಿಳಿದಿರಲಿಲ್ಲ. ನಾನು ಬೇರೆ ಕೆಲಸಗಳಲ್ಲಿ ವ್ಯಸ್ತನಾಗಿದ್ದೆ. ಆ ರ‍್ಯಾಲಿಗೆ ಆಹ್ವಾನವಿದ್ದವರು ಹೋಗಿದ್ದಿರಬಹುದು ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಹಾಗೂ ಎಡಪಕ್ಷಗಳ ನಾಯಕರಾದ ಪಿಣರಾಯಿ ವಿಜಯನ್, ಡಿ ರಾಜ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ನಾಯಕರ್ಯಾರೂ ಈ ಸಭೆಯಲ್ಲಿ ಭಾಗಿಯಾಗಿರಲಿಲ್ಲ.
 
ಕೆಸಿಆರ್ ನೇತೃತ್ವದ ಈ ರ‍್ಯಾಲಿಯನ್ನು 2024 ರ ರಾಷ್ಟ್ರೀಯ ಚುನಾವಣೆಗೆ ಕಾಂಗ್ರೆಸ್ಸೇತರ ವಿಪಕ್ಷಗಳ ಒಕ್ಕೂಟದ ಕಾರ್ಯಕ್ರಮವೆಂದೇ ವಿಶ್ಲೇಷಿಸಲಾಗುತ್ತಿದೆ.

SCROLL FOR NEXT