ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನದ ಬೇಡಿಕೆಯು ಕಣಿವೆ ರಾಜ್ಯದ ಅತಿದೊಡ್ಡ ವಿಚಾರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದನ್ನು ಮರುಸ್ಥಾಪಿಸಲು "ತನ್ನ ಸಂಪೂರ್ಣ ಶಕ್ತಿಯನ್ನು" ಬಳಸುತ್ತದೆ ಎಂದು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಕಾಶ್ಮೀರದಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಯಾತ್ರೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಭೇಟಿಯಾದ ರಾಹುಲ್ ಗಾಂಧಿ, ಕಾಶ್ಮೀರ ದೇಶದಲ್ಲಿಯೇ ಅತಿ ಹೆಚ್ಚು ನಿರುದ್ಯೋಗವನ್ನು ಹೊಂದಿದೆ ಎಂದಿದ್ದಾರೆ.
"ಕಾಂಗ್ರೆಸ್ ಪಕ್ಷವು ನಿಮ್ಮನ್ನು ಮತ್ತು ನಿಮ್ಮ ರಾಜ್ಯತ್ವ ಬೇಡಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲು, ಕಾಂಗ್ರೆಸ್ ತನ್ನ ಸಂಪೂರ್ಣ ಅಧಿಕಾರವನ್ನು ಬಳಸುತ್ತದೆ" ಎಂದು ರಾಹುಲ್ ಗಾಂಧಿ ಅವರು ಇಲ್ಲಿನ ಸತ್ವಾರಿ ಚೌಕ್ನಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದರು.
"ರಾಜ್ಯತ್ವವೇ ನಿಮ್ಮ ದೊಡ್ಡ ಬೇಡಿಕೆ. ರಾಜ್ಯತ್ವದಷ್ಟು ದೊಡ್ಡ ಬೇಡಿಕೆ ಮತ್ತೊಂದು ಇಲ್ಲ. ನಿಮ್ಮ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಆದರೆ ನಿಮ್ಮ ಮಾತು ಸರ್ಕಾರಕ್ಕೆ ಕೇಳಿಸುತ್ತಿಲ್ಲ" ಎಂದು ಅವರು ಹೇಳಿದರು.
"ಕಾಶ್ಮೀರದಲ್ಲಿ ಎಲ್ಲಾ ವ್ಯಾಪಾರವನ್ನು ಹೊರಗಿನವರು ನಡೆಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನತೆ ಅಸಹಾಯಕರಾಗಿ ಕುಳಿತು ನೋಡುತಿದ್ದಾರೆ" ಎಂದರು.