ನವದೆಹಲಿ: ಇಡೀ ರಾತ್ರಿ ನನಗೆ ಜೀವ ಬೆದರಿಕೆ ಕರೆಗಳು, ದ್ವೇಷಪೂರಿತ ಸಂದೇಶಗಳು ಬಂದಿದ್ದವು ಎಂದು ಮಾಜಿ ಕೇಂದ್ರ ಸಚಿವ ಎಕೆ ಆ್ಯಂಟೊನಿಯವರ ಪುತ್ರ ಅನಿಲ್ ಆ್ಯಂಟೊನಿಯವರು ಬುಧವಾರ ಹೇಳಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅನಿಲ್ ಆ್ಯಂಟೊನಿಯವರು, ರಾಜೀನಾಮೆ ನನ್ನ ವೈಯಕ್ತಿಕ ನಿರ್ಧಾರ. ಈ ನಿರ್ಧಾರ ಅತ್ಯುತ್ತಮ ಕ್ರಮವೆಂದು ನಾನು ಭಾವಿಸುತ್ತೇನೆ. ಈ ಬಗ್ಗೆ ತಂದೆ ಜೊತೆಗೆ ಚರ್ಚಿಸಿಲ್ಲ. ಪಕ್ಷದ ವರಿಷ್ಠರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ನಾಯಕತ್ವ ನನ್ನ ರಾಜೀನಾಮೆ ಅಂಗೀಕರಿಸುವ ಭರವಸೆಯಿದೆ ಎಂದು ಹೇಳಿದ್ದಾರೆ.
ಇಡೀ ರಾತ್ರಿ ನನಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ದ್ವೇಷ ಪೂರಿತ ಸಂದೇಶಗಳು ಬಂದಿವೆ. ಇದೆಲ್ಲವೂ ಕಳೆದ 24 ಗಂಟೆಗಳಲ್ಲಿ ನಡೆದಿದೆ. ಪಕ್ಷದಿಂದ ನನಗೆ ಬಹಳ ನೋವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿ ನಿರ್ಬಂಧ ಸಮರ್ಥಿಸಿಕೊಂಡ ಅನಿಲ್ ಆ್ಯಂಟೊನಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ!
ನಾನು ಮಾಡಿದ್ದ ಟ್ವೀಟ್ ಗಳನ್ನು ಹಿಂತೆಗೆದುಕೊಳ್ಳಲು ನಾನು ಸಿದ್ಧನಿಲ್ಲ. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ನಕಾರಾತ್ಮಕತೆಯನ್ನು ಮುಂದುವರೆಸುವ ಬದಲು ನನ್ನ ಇತರೆ ವೃತ್ತಿಪರ ಪ್ರಯತ್ನಗಳನ್ನು ಮುಂದುವರಿಸಲು ಬಯಸುತ್ತೇನೆಂದಿದ್ದಾರೆ.
ಪ್ರಧಾನಿ ಮೋದಿ ಹಾಗೂ 2002 ರ ಗುಜರಾತ್ ಗಲಭೆಯ ಬಗ್ಗೆ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದ ಅನಿಲ್ ಆ್ಯಂಟೊನಿಯವರು, "ಭಾರತದ ವಿರುದ್ಧ ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ" ಹೊಂದಿರುವ ಬಿಬಿಸಿಯನ್ನು ಸರಕಾರಿ ಪ್ರಾಯೋಜಿತ ಚಾನೆಲ್ ಎಂದು ಕರೆದಿದ್ದರು.