ದೇಶ

ಕೇಂದ್ರ ಬಜೆಟ್ 2023: ಬಜೆಟ್‌ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ, ಪ್ರತಿಪಕ್ಷಗಳ ಸಹಕಾರದ ನಿರೀಕ್ಷೆಯಲ್ಲಿ ಸರ್ಕಾರ

Manjula VN

ನವದೆಹಲಿ: ಮಂಗಳವಾರದಿಂದ (ಜ.31) ಸಂಸತ್ತಿನಲ್ಲಿ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಬಜೆಟ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಸೋಮವಾರ ಸರ್ವಪಕ್ಷ ಸಭೆಯನ್ನು ಕರೆದಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು, ಇಂದು ಮಧ್ಯಾಹ್ನ ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಸಭೆಯಲ್ಲಿ, ಸಂಸತ್ತು ಸುಗಮವಾಗಿ ನಡೆಯಲು ಸರ್ಕಾರವು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರಲಿದೆ. ಪ್ರತಿಪಕ್ಷಗಳು ಅಧಿವೇಶನದಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿರುವ ಕಾಳಜಿಯ ವಿಷಯಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ.

ಬಜೆಟ್‌ ಸಹಕಾರದ ಕಾರ್ಯತಂತ್ರ ರೂಪಿಸಲು ಇಂದು ಮಧ್ಯಾಹ್ನ, ಎನ್‌ಡಿಎ ನಾಯಕರ ಪ್ರತ್ಯೇಕ ಸಭೆಯನ್ನೂ ಕರೆಯಲಾಗಿದೆ. ಸರ್ಕಾರದ ಹಣಕಾಸು ಕಾರ್ಯಸೂಚಿಯೊಂದಿಗೆ, ಬಜೆಟ್ ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ.

ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದು, ರಾಷ್ಟ್ರಪತಿಗಳ ಭಾಷಣದ ನಂತರ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದು, 2023-24ರ ಕೇಂದ್ರ ಬಜೆಟ್ 2024ರ ಲೋಕಸಭೆ ಚುನಾವಣೆಯ ಮೊದಲು ಮಂಡಿಸಲಾಗುವ ಕೊನೆಯ ಪೂರ್ಣ ಬಜೆಟ್ ಆಗಿರಲಿದೆ.

ಅಧಿವೇಶನದ ಮೊದಲ ಭಾಗವು ಜನವರಿ 31ರಿಂದ ಆರಂಭಗೊಂಡು, ಫೆಬ್ರವರಿ 13ರವರೆಗೆ ನಡೆಯಲಿದೆ. ರಾಷ್ಟ್ರಪತಿಗಳ ಭಾಷಣಕ್ಕೆ 'ವಂದನಾ ನಿರ್ಣಯ' ಮಂಡಿಸುವ ಪ್ರಧಾನಿ ಮೋದಿಯವರ ಭಾಷಣದೊಂದಿಗೆ ಮೊದಲ ಭಾಗ ಮುಕ್ತಾಯಗೊಳ್ಳಲಿದೆ. ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ಆರಂಭಗೊಳ್ಳಲಿದೆ.

ವಿವಿಧ ಸಚಿವಾಲಯಗಳ ಅನುದಾನದ ಬೇಡಿಕೆಯನ್ನು ಚರ್ಚಿಸಲು, ಸಂಸದೀಯ ಸಮಿತಿಗಳ ವಿರಾಮದ ನಂತರ ಸಂಸತ್ತು ಮತ್ತೆ ಸೇರಲಿದೆ. ಎರಡನೇ ಭಾಗ ಮಾರ್ಚ್ 13ರಂದು ಆರಂಭವಾಗಲಿದ್ದು, ಏಪ್ರಿಲ್ 6ರವರೆಗೆ ನಡೆಯಲಿದೆ.

SCROLL FOR NEXT