ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಪಕ್ಷದ ಕಾರ್ಯಾಧ್ಯಕ್ಷೆ ಮತ್ತು ಅವರ ಸೋದರ ಸಂಬಂಧಿ ಸುಪ್ರಿಯಾ ಸುಳೆ ಅವರು ಪಕ್ಷದಲ್ಲಿನ ಬೆಳವಣಿಗೆಗಳು ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ತಡರಾತ್ರಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಪ್ರಿಯಾ ಸುಳೆ, ತಮ್ಮ ತಂದೆ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸ್ಥಾನಮಾನ ಮತ್ತಷ್ಟು ಹೆಚ್ಚಾಗಲಿದೆ. ಅಜಿತ್ ಪವಾರ್ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರಬಹುದು, ಹಾಗೆಂದು ಅಣ್ಣನ ಜೊತೆ ಜಗಳವಾಡಲು ಹೋಗುವುದಿಲ್ಲ. ಮೊದಲಿನಂತೆ ಸಹೋದರಿಯಾಗಿ ಅವರ ಮೇಲೆ ಪ್ರೀತಿ, ವಿಶ್ವಾಸ ಹೊಂದಿದ್ದೇನೆ ಎಂದರು.
ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಮಹಾರಾಷ್ಟ್ರದ ಶಿವಸೇನೆ-ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಭಾನುವಾರ ಸೇರ್ಪಡೆಗೊಂಡರು, ಅವರ ಜೊತೆ ಎಂಟು ಮಂದಿ ಪಕ್ಷದ ಇತರ ನಾಯಕರು ಸಚಿವರಾಗಿ ಸೇರ್ಪಡೆಗೊಂಡರು.
ಸುಪ್ರಿಯಾ ಸುಳೆ ಅವರು ಕಳೆದ ತಿಂಗಳು ಪಕ್ಷದ ಕಾರ್ಯಾಧ್ಯಕ್ಷರಾಗಿ ಬಡ್ತಿ ಹೊಂದಿದ್ದು ಅಜಿತ್ ಪವಾರ್ ಅವರ ಬಂಡಾಯವನ್ನು ಪ್ರಚೋದಿಸಿತು ಎಂದು ಹೇಳಲಾಗುತ್ತಿದ್ದು, ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಸೇರ್ಪಡೆ ಎನ್ ಸಿಪಿಯಲ್ಲಿ ಮತ್ತು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: ಶಿವಸೇನೆ ಜೊತೆ ಸೇರಬಹುದಾದರೆ, ಬಿಜೆಪಿ ಜೊತೆಗೂ ಸೇರಬಹುದು, ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸ ಉತ್ತಮವಾಗಿದೆ: ಅಜಿತ್ ಪವಾರ್
ನನ್ನ ಸೋದರನೊಂದಿಗೆ ಜಗಳವಾಡುವುದಿಲ್ಲ, ವೈಯಕ್ತಿಕ ಮತ್ತು ವೃತ್ತಿ ಸಂಬಂಧಗಳನ್ನು ಒಟ್ಟಿಗೆ ಬೆಸೆಯುವುದಿಲ್ಲ. ಭಾವನಾತ್ಮಕ ಸಂಬಂಧಗಳು ಮತ್ತು ವೃತ್ತಿಪರ ಕೆಲಸಗಳು ಎರಡು ವಿಭಿನ್ನ ವಿಷಯಗಳಾಗಿವೆ. ನಾನು ಎರಡನ್ನು ಎಂದಿಗೂ ಒಟ್ಟಿಗೆ ನೋಡುವುದಿಲ್ಲ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ.
ಇತರ ಹಲವು ದಿನಗಳಂತೆ ಇದು ಸವಾಲಿನ ದಿನವಾಗಿದೆ ಎಂದರು. ಬೆಳಗ್ಗೆ ಮುಂಬೈನಲ್ಲಿರುವ ಅಜಿತ್ ಪವಾರ್ ಅವರ ಅಧಿಕೃತ ನಿವಾಸ 'ದೇವಗಿರಿ'ಯಲ್ಲಿ ನಡೆದ ಸಭೆಯಲ್ಲಿ ಏನು ನಡೆಯಿತು ಎಂಬ ಪ್ರಶ್ನೆಗೆ, ಸುಳೆ ಅವರು ತಮ್ಮ ಮತ್ತು ಸಹೋದರನ ನಡುವೆ ಏನು ಚರ್ಚಿಸಲಾಗಿದೆ ಎಂಬುದು ನಮ್ಮ ಮಧ್ಯೆ ಮಾತ್ರ ಇರುತ್ತದೆ ಎಂದರು.
ಪಕ್ಷ ಸಂಘಟನೆಯನ್ನು ಬಲಪಡಿಸಲು ಮತ್ತು ರಾಜ್ಯ ಮತ್ತು ದೇಶದ ಕಲ್ಯಾಣಕ್ಕಾಗಿ ನವ ಚೈತನ್ಯದಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಬಾರಾಮತಿ ಸಂಸದೆಯಾಗಿರುವ ಸುಪ್ರಿಯಾ ಸುಳೆ ಹೇಳಿದ್ದಾರೆ.