ದೇಶ

ಪಶ್ಚಿಮ ಬಂಗಾಳ: ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ; ಮೃತರ ಸಂಖ್ಯೆ 14ಕ್ಕೆ ಏರಿಕೆ

Nagaraja AB

ನಾಡಿಯಾ: ಪಶ್ಚಿಮ ಬಂಗಾಳದಲ್ಲಿ ಇಂದು ನಡೆದ ಪಂಚಾಯತ್ ಚುನಾವಣೆ ಮತದಾನ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.  2024 ರ ಲೋಕಸಭೆ ಚುನಾವಣೆಗೆ  ಒಂದು ವರ್ಷ ಬಾಕಿ ಇರುವಂತೆಯೇ ಮಹತ್ವದು ಎಂದೇ ಪರಿಗಣಿಸಲಾದ ಮೂರು ಹಂತದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆಯಲ್ಲಿ ಮತಗಟ್ಟೆಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಬ್ಯಾಲೆಟ್ ಪೇಪರ್‌ಗಳಿಗೆ ಬೆಂಕಿ ಹಚ್ಚಲಾಯಿತು.

ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ನಾಡಿಯಾ, ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೂಚ್ ಬೆಹಾರ್‌ನಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ನಿನ್ನೆ ಸಂಜೆ ತೀವ್ರವಾಗಿ ಗಾಯಗೊಂಡಿದ್ದ ಸಿಪಿಐ(ಎಂ) ಕಾರ್ಯಕರ್ತ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉತ್ತರ 24 ಪರಗಣದ ಕದಂಬಗಚಿಯಲ್ಲಿ ನಡೆದ ಘರ್ಷಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಮತ್ತೊಬ್ಬ ಬೆಂಬಲಿಗ ಗಾಯಗೊಂಡಿದ್ದಾನೆ. ವ್ಯಕ್ತಿಯನ್ನು ಹೊಡೆದು ಸಾಯಿಸಲಾಗಿದೆ ಎಂದು ಆತನ ಕುಟುಂಬದವರು ಹೇಳಿದ್ದಾರೆ. ಆದರೆ, ಅವರು ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬರಾಸತ್ ಜಿಲ್ಲಾ ಪೊಲೀಸ್ ಎಸ್ಪಿ ಭಾಸ್ಕರ್ ಮುಖರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ವಿವಿಧ ಜಿಲ್ಲೆಗಳಲ್ಲಿ ಜನರನ್ನು ಭೇಟಿ ಮಾಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಹಿಂಸಾತ್ಮಕ ಘಟನೆಗಳನ್ನು ಖಂಡಿಸಿದ ಅವರು,ಇದು ನಮ್ಮೆಲ್ಲರಿಗೂ ಕಳವಳವನ್ನುಂಟು ಮಾಡಿದೆ ಎಂದರು. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಪವಿತ್ರವಾದ ದಿನವಾಗಿದೆ.ಚುನಾವಣೆಯು ಮತಯಂತ್ರಗಳ ಮೂಲಕ ನಡೆಯಬೇಕೇ ಹೊರತು ಬುಲೆಟ್‌ಗಳಲ್ಲ ಎಂದು ಹೇಳಿದರು.

ಕೆಲವು ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳ ಅನುಪಸ್ಥಿತಿಯ ವರದಿಗಳ ನಡುವೆ ರಾಜ್ಯ ಚುನಾವಣಾ ಆಯುಕ್ತ ರಾಜೀವ ಸಿನ್ಹಾ ಎಲ್ಲಾ ಸಿಬ್ಬಂದಿಯ ಸಂಖ್ಯೆ ಮತ್ತು ನಿಯೋಜನೆ ಬಗ್ಗೆ ವಿವರಗಳನ್ನು ಹೇಳಿದರು. ಸುಮಾರು 65,000ಕೇಂದ್ರ ಪೊಲೀಸ್ ಸಿಬ್ಬಂದಿ ಮತ್ತು 70,000 ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ಚುನಾವಣೆಗೆ ನಿಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು

SCROLL FOR NEXT