ದೇಶ

ಯುವಕನ ಹತ್ಯೆಗೆ ಬೆಚ್ಚಿಬಿದ್ದ ದೆಹಲಿ: ಪ್ರಿಯಕರನ ಕತ್ತು ಸೀಳಿ ಕೊಂದ ಯುವತಿಯ ಕುಟುಂಬಸ್ಥರು, ವಿಡಿಯೋ ಮಾಡುತ್ತಿದ್ದ ಜನ!

Vishwanath S

ನವದೆಹಲಿ: ಚೌಹಾಣ್ ಬಂಗಾರ್ ನಲ್ಲಿ ಪ್ರೇಮ ಪ್ರಕರಣದಲ್ಲಿ ಇಬ್ಬರು ಪುತ್ರರೊಂದಿಗೆ ಸೇರಿಕೊಂಡು ತಂದೆಯೋರ್ವ ಯುವಕನೋರ್ವನನ್ನು ಹಾಡಹಗಲೇ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 

ಚಾಕುವಿನಿಂದ ಕತ್ತು ಸೀಳಿ ಬಳಿಕ ಹೊಟ್ಟೆ ಹಾಗೂ ಎದೆಗೆ ಇರಿಯಲಾಗಿದೆ. ರಸ್ತೆಯಲ್ಲಿ ಜನಸಂದಣಿ ಇದ್ದರೂ ಯಾರೂ ಆರೋಪಿಗಳನ್ನು ತಡೆಯಲು ಮುಂದಾಗದೇ ಮುಖಪ್ರೇಕ್ಷಕರರಂತೆ ನೋಡುತ್ತಾ ನಿಂತಿದ್ದರು. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕಾಗಮಿಸಿದ ಯುವತಿ ಯುವಕನ ಶವವನ್ನು ಗುರುತಿಸಿ ತನ್ನ ತಂದೆ ಮತ್ತು ಸಹೋದರರೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. 

ಮೃತನನ್ನು ಸಲ್ಮಾನ್ ಎಂದು ಗುರುತಿಸಲಾಗಿದ್ದು ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ಕೊಲೆಯ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಮಂಜೂರ್, ಆತನ ಮಗ ಮೊಹ್ಸಿನ್ ಮತ್ತು ಅಪ್ರಾಪ್ತ ಮಗನ ಪತ್ತೆಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಸಲ್ಮಾನ್ ತನ್ನ ಕುಟುಂಬದೊಂದಿಗೆ ಬ್ರಹ್ಮಪುರಿ ಗಲಿ ಸಂಖ್ಯೆ-7 ರಲ್ಲಿ ವಾಸಿಸುತ್ತಿದ್ದರು. ಕುಟುಂಬದಲ್ಲಿ ತಂದೆ ಆಸ್ ಮೊಹಮ್ಮದ್, ತಾಯಿ ಸಾಯಿರಾ ಬಾನು, ಎಂಟು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ. ಸಲ್ಮಾನ್ ಮದುವೆಯಾಗಿರಲಿಲ್ಲ. ಚೌಹಾನ್ ಬಂಗಾರ್ ಗಲಿ ನಂ. 19 ರಲ್ಲಿ ಅವರು ಜೀನ್ಸ್ ಫ್ಯಾಕ್ಟರಿಯನ್ನು ಹೊಂದಿದ್ದರು. ಸಲ್ಮಾನ್ ಎರಡು ವರ್ಷಗಳಿಂದ ಕಲ್ಯಾಣ್ ಸಿನಿಮಾ ಸ್ಟ್ರೀಟ್‌ನಲ್ಲಿ ವಾಸಿಸುತ್ತಿದ್ದ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬಾಲಕಿಯ ಸಂಬಂಧಿಕರು ವಿರೋಧಿಸಿದ್ದರು. ಸೋಮವಾರ ಸಂಜೆ ಐದು ಗಂಟೆಗೆ ಸಲ್ಮಾನ್ ಮೋಟಾರ್ ಸೈಕಲ್ ನಲ್ಲಿ ಕಲ್ಯಾಣ್ ಚಿತ್ರಮಂದಿರದ ರಸ್ತೆಯಲ್ಲಿ ಹೋಗುತ್ತಿದ್ದನು. ಮಂಜೂರ್ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ತಡೆದು ನಿಲ್ಲಿಸಿದನು. ಅವನಿಗೆ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅವನ ಗಂಟಲು ಸೀಳಲಾಗಿತ್ತು. ತೀವ್ರ ನೋವಿನಿಂದ ಬೈಕ್‌ನಿಂದ ಕೆಳಗೆ ಬಿದ್ದ ಯುವಕನಿಗೆ ನಂತರ ಚಾಕುವಿನಿಂದ ಹಲ್ಲೆ ನಡೆಸಿದ್ದರು. 

ಯುವಕನ ಸಾವಿನ ನಂತರ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸಲ್ಮಾನ್ ಗೆಳತಿಯ ಮನೆಯ ಬಳಿಯೇ ಘಟನೆ ನಡೆದಿದ್ದು ಸಲ್ಮಾನ್ ಮೃತದೇಹದ ಬಳಿ ಗೆಳತಿ ಬಿಕ್ಕಿಬಿಕ್ಕಿ ಅತ್ತಿದ್ದಾಳೆ.

ಹಾಡಹಗಲೇ ಯುವಕನ ಹತ್ಯೆಯಿಂದ ಆತಂಕ ಸೃಷ್ಟಿಯಾಗಿತ್ತು. ಅಹಂಕಾರಕ್ಕೆ ವ್ಯಕ್ತಿಯೊಬ್ಬ ತನ್ನ ಪುತ್ರರೊಂದಿಗೆ ಸೇರಿ ಯುವಕನ ಮೇಲೆ ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡಲಾಗಿತ್ತು. ಕೊಲೆ ನಂತರ ಜನರು ತಮ್ಮ ಮೊಬೈಲ್‌ನಲ್ಲಿ ರಕ್ತಸಿಕ್ತ ಸ್ಥಿತಿಯ ವೀಡಿಯೊಗಳನ್ನು ಮಾಡುತ್ತಿದ್ದರು. ಯಾರೂ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಿಲ್ಲ.

SCROLL FOR NEXT