ದೇಶ

'ಶಿಸ್ತು ಸಶಸ್ತ್ರ ಪಡೆಗಳ ಸೂಚ್ಯ ಲಕ್ಷಣ': ಸೇನಾ ಚಾಲಕನ ವಜಾ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್

Lingaraj Badiger

ನವದೆಹಲಿ: ಶಿಸ್ತು ಸಶಸ್ತ್ರ ಪಡೆಗಳ 'ಸೂಚ್ಯ ಲಕ್ಷಣ' ಮತ್ತು 'ನೆಗೋಶಬಲ್ ಅಲ್ಲದ ಸೇವೆ' ಎಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್, ನೋಟಿಸ್ ಇಲ್ಲದೆ ಹೆಚ್ಚುವರಿ ರಜೆ ತೆಗೆದುಕೊಂಡಿದ್ದ ಸೇನಾ ಚಾಲಕನ ವಜಾ ಆದೇಶವನ್ನು ಎತ್ತಿಹಿಡಿದಿದೆ.

ವಜಾ ಆದೇಶ ಪ್ರಶ್ನಿಸಿ ಸೇನಾ ಚಾಲಕ ಮದನ್ ಪ್ರಸಾದ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ, ಸಶಸ್ತ್ರ ಪಡೆಗಳಲ್ಲಿ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ಶಿಸ್ತುಬದ್ಧವಾಗಿರುವುದು ಸಶಸ್ತ್ರ ಪಡೆಗಳ ಸೇವೆಯ ಆಂತರಿಕ ಭಾಗವಾಗಿದೆ ಎಂದು ಹೇಳಿದೆ.

ಮೇಲ್ಮನವಿದಾರ, ಮಾಜಿ ಸಿಪಾಯಿ, ಒಬ್ಬ ಸಾಮಾನ್ಯ ಅಪರಾಧಿಯಾಗಿ ಕಾಣಿಸುತ್ತಿದ್ದಾರೆ. ಅವರ ಮೇಲ್ಮನವಿ ಅಂಗೀಕರಿಸಿದರೆ, ಅದು ಸೇವೆಯಲ್ಲಿರುವ ಇತರರಿಗೆ ತಪ್ಪು ಸಂದೇಶ ಕಳುಹಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸೇನಾ ಚಾಲಕ ಮದನ್ ಪ್ರಸಾದ್ ಅವರು ಫೆಬ್ರವರಿ 2015ರಲ್ಲಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಲಖನೌ ಪ್ರಾದೇಶಿಕ ಪೀಠ ತನ್ನನ್ನು ಸೇವೆಯಿಂದ ವಜಾಗೊಳಿಸಿದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

SCROLL FOR NEXT