ದೇಶ

ಹೈದರಾಬಾದ್: ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡು ಪತ್ನಿಯನ್ನು ಕೊಂದ ಪತಿ

Ramyashree GN

ಹೈದರಾಬಾದ್: ತನ್ನ ಪತ್ನಿ ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಶವಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗವಾಗುವ ಮೂಲಕ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೇ 20ರ ರಾತ್ರಿ ಅಪರಾಧ ನಡೆದಿದ್ದರೂ, ಪೊಲೀಸರು 10 ದಿನಗಳ ನಂತರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಟಾವತ್ ತರುಣ್ (24) ಎಂಬಾತ ತನ್ನ ಪತ್ನಿ ಝಾನ್ಸಿ (20) ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ತೆಲಂಗಾಣದ ನಗರ್‌ಕರ್ನೂಲ್ ಜಿಲ್ಲೆಯವರಾದ ಇವರಿಬ್ಬರು 2021ರಲ್ಲಿ ಪ್ರೇಮ ವಿವಾಹವಾಗಿದ್ದರು. ಆಟೋ ರಿಕ್ಷಾ ಚಾಲಕನಾಗಿದ್ದ ತರುಣ್ ತನ್ನ ಪತ್ನಿಯೊಂದಿಗೆ ಹೈದರಾಬಾದ್‌ಗೆ ವಲಸೆ ಬಂದಿದ್ದು, ಕುಟುಂಬವು ಐಎಸ್ ಸದನ್ ವಿಭಾಗದ ಖಾಜಾ ಬಾಗ್‌ನಲ್ಲಿ ನೆಲೆಸಿತ್ತು. ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಏಪ್ರಿಲ್ 16ರಂದು ಝಾನ್ಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಮೇ 20ರ ರಾತ್ರಿ ತರುಣ್ ತನ್ನ ಆಸೆಯನ್ನು ಪತ್ನಿಯೊಂದಿಗೆ ಹಂಚಿಕೊಂಡಿದ್ದಾನೆ. ಈ ವೇಳೆ ಝಾನ್ಸಿ ತನಗೆ ತುಂಬಾ ಸುಸ್ತಾಗಿರುವುದಾಗಿ ತಿಳಿಸಿದ್ದಾಳೆ. ಆದಾಗ್ಯೂ, ಆತ ಆಕೆಯನ್ನು ಒತ್ತಾಯಪಡಿಸಿದ್ದಾನೆ. ಅವಳು ಕೂಗಲು ಪ್ರಾರಂಭಿಸಿದಾಗ, ಆತ ಆಕೆಯ ಬಾಯಿಯನ್ನು ಮುಚ್ಚಿದ್ದಾನೆ. ಕೆಲ ಸಮಯದವರೆಗೆ ಆಕೆಯ ಬಾಯಿ ಮತ್ತು ಮೂಗನ್ನು ತನ್ನ ಕೈಯಿಂದ ಮುಚ್ಚಿಕೊಂಡಿದ್ದರಿಂದ ಉಸಿರಾಡಲು ಸಾಧ್ಯವಾಗದೆ ಆಕೆ ಚಲನೆಯನ್ನು ಕಳೆದುಕೊಂಡಿದ್ದಾಳೆ ಮತ್ತು ಬಾಯಿಯಲ್ಲಿ ನೊರೆ ಬರಲು ಪ್ರಾರಂಭಿಸಿದೆ. ಈ ವೇಳೆ ತರುಣ್ ಗಾಬರಿಗೊಂಡು ತನ್ನ ಸಂಬಂಧಿಕರನ್ನು ಕೂಗಿದ್ದಾನೆ. ಕೂಡಲೇ ಆಕೆಯನ್ನು ಒವೈಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು ಎಂದು ತರುಣ್ ಪೊಲೀಸರಿಗೆ ತಿಳಿಸಿದ್ದಾನೆ.

ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಝಾನ್ಸಿಯ ತಂದೆ ನೆನವತ್ ರೆಕಿಯಾ ನೀಡಿದ ದೂರಿನ ಮೇರೆಗೆ ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 30ರಂದು ನಡೆದ ಶವಪರೀಕ್ಷೆ ವರದಿಯಲ್ಲಿ ಮಹಿಳೆ ಉಸಿರುಗಟ್ಟಿ ಸಾವಿಗೀಡಾಗಿರುವುದು ತಿಳಿದುಬಂದಿದೆ.

ಪೊಲೀಸರು ತರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

SCROLL FOR NEXT