ದೇಶ

ತರಾತುರಿಯಲ್ಲಿ ನಿರ್ಧಾರ ಬೇಡ: ಕಪಿಲ್ ದೇವ್, ಗವಾಸ್ಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರಿಂದ ಕುಸ್ತಿಪಟುಗಳಿಗೆ ಬೆಂಬಲ!

Vishwanath S

ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಹಲವು ಮಾಜಿ ಕ್ರಿಕೆಟಿಗರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. 

1983ರ ವಿಶ್ವಕಪ್ ವಿಜೇತ ತಂಡದ ಆಟಗಾರರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ದಿಲೀವ್ ವೆಂಗ್‌ಸರ್ಕರ್, ಮದನ್‌ಲಾಲ್ ಮುಂತಾದವರು ಕುಸ್ತಿಪಟುಗಳೊಂದಿಗಿನ ಘಟನೆಯನ್ನು ದುರಂತ ಎಂದು ಬಣ್ಣಿಸಿದ್ದಾರೆ. ಕುಸ್ತಿಪಟುಗಳ ಬೇಡಿಕೆಗೆ ಕಿವಿಯಾಗುವ ನಿರೀಕ್ಷೆ ಇದೆ ಎಂದರು. ತರಾತುರಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಈ ಆಟಗಾರರು ಕುಸ್ತಿಪಟುಗಳಿಗೆ ಮನವಿ ಮಾಡಿದ್ದಾರೆ. ಇದರೊಂದಿಗೆ ಕಷ್ಟಪಟ್ಟು ಗಳಿಸಿದ ಪದಕಗಳನ್ನು ಗಂಗಾನದಿಯಲ್ಲಿ ಎಸೆಯಬಾರದು ಎಂದೂ ಹೇಳಿದ್ದಾರೆ.

ನಮ್ಮ ಚಾಂಪಿಯನ್ ಕುಸ್ತಿಪಟುಗಳ ಜೊತೆ ಅನುಚಿತವಾಗಿ ವರ್ತಿಸಿರುವುದಕ್ಕೆ ನಾವು ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ. ಅವರು ಕಷ್ಟಪಟ್ಟು ದುಡಿದ ಪದಕವನ್ನು ಎಸೆಯುತ್ತಿದ್ದಾರೆ ಎಂಬ ಅಂಶದ ಬಗ್ಗೆ ನಾವು ಹೆಚ್ಚು ಕಾಳಜಿ ಮಾಡಬೇಕಿದೆ. ಆ ಪದಕಗಳು ವರ್ಷಗಳ ಪ್ರಯತ್ನ, ತ್ಯಾಗ, ಸಂಕಲ್ಪ ಮತ್ತು ಶ್ರದ್ಧೆಗಳನ್ನು ಒಳಗೊಂಡಿವೆ. ಅದು ಅವರ ಸ್ವಂತದ್ದು ಮಾತ್ರವಲ್ಲದೆ ದೇಶದ ಹೆಮ್ಮೆ ಮತ್ತು ಸಂತೋಷವಾಗಿದೆ. ಈ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ನಾವು ಅವರನ್ನು ಒತ್ತಾಯಿಸುತ್ತೇವೆ. ಅವರ ಕುಂದುಕೊರತೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಲಾಗುವುದು ಎಂದು ಭಾವಿಸುತ್ತೇವೆ. ದೇಶದ ಕಾನೂನು ಮೇಲುಗೈ ಸಾಧಿಸಲಿ ಎಂದು ಬರೆದಿದ್ದಾರೆ.

ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಮೇ 30ರಂದು ಹರಿದ್ವಾರಕ್ಕೆ ಹೋಗಿ ಗಂಗಾ ನದಿಗೆ ಎಸೆಯಲು ಮುಂದಾಗಿದ್ದರು. ಆದರೆ ರೈತ ಮುಖಂಡರ ಮನವೊಲಿಕೆಯಿಂದ ಕುಸ್ತಿಪಟುಗಳು ಹಿಂತಿರುಗಿದ್ದರು.

ಸುನಿಲ್ ಗವಾಸ್ಕರ್, ಮೊಹಿದರ್ ಅಮರನಾಥ್, ಕೆ ಶ್ರೀಕಾಂತ್, ಸೈಯದ್ ಕಿರ್ಮಾನಿ, ಯಶಪಾಲ್ ಶರ್ಮಾ, ಮದನ್ ಲಾಲ್, ಬಲ್ವಿಂದರ್ ಸಿಂಗ್ ಸಂಧು, ಸಂದೀಪ್ ಪಾಟೀಲ್, ಕೀರ್ತಿ ಆಜಾದ್, ರೋಜರ್ ಬಿನ್ನಿ ಮತ್ತು ರವಿಶಾಸ್ತ್ರಿ 1983 ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದರು.

SCROLL FOR NEXT