ದೇಶ

ಒಡಿಶಾ ರೈಲು ದುರಂತ: ಪಶ್ಚಿಮ ಬಂಗಾಳದ ಸುಂದರಬನ್ಸ್ ಪ್ರದೇಶದಿಂದ ಗರಿಷ್ಠ ಸಾವು ವರದಿ

Ramyashree GN

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸುಂದರಬನ್ಸ್ ಪ್ರದೇಶವು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಅಪಘಾತದ ಪರಿಣಾಮವಾಗಿ ಉಂಟಾದ ಸಾವುಗಳ ಪೈಕಿ ರಾಜ್ಯದಿಂದ ಗರಿಷ್ಠ ಸಂಖ್ಯೆಯ ಸಾವುನೋವುಗಳನ್ನು ದಾಖಲಿಸಿದೆ.

ಶನಿವಾರ ಮಧ್ಯರಾತ್ರಿ 12ರವರೆಗಿನ ರಾಜ್ಯ ಸಚಿವಾಲಯದ ಪ್ರಾಥಮಿಕ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ನಿವಾಸಿಗಳಾಗಿರುವ ಒಟ್ಟು 31 ಜನರ ಪೈಕಿ 19 ಜನರು ದಕ್ಷಿಣ 24 ಪರಗಣ ಜಿಲ್ಲೆಯವರು. ಆ 19 ರಲ್ಲಿ, ಸುಂದರಬನ್ಸ್ ಪ್ರದೇಶದ 14 ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿವೆ.

ರಾಜ್ಯ ಸರ್ಕಾರದ ವರದಿಯ ಪ್ರಕಾರ, ರೈಲು ಅಪಘಾತದ ದುರ್ಘಟನೆಯಲ್ಲಿ ಗಾಯಾಳುಗಳ ಪೈಕಿ ಪಶ್ಚಿಮ ಬಂಗಾಳದಿಂದ ಗರಿಷ್ಠ ಸಂಖ್ಯೆಯ ಗಾಯಗೊಂಡವರು ದಕ್ಷಿಣ 24 ಪರಗಣ ಜಿಲ್ಲೆಗೆ ಸೇರಿದವರಾಗಿದ್ದಾರೆ.

ರಾಜ್ಯದ ಒಟ್ಟು 544 ಮಂದಿ ಗಾಯಾಳುಗಳ ಪೈಕಿ ದಕ್ಷಿಣ 24 ಪರಗಣ ಜಿಲ್ಲೆಯಿಂದಲೇ 105 ಮಂದಿ ಗಾಯಗೊಂಡಿದ್ದಾರೆ.

ಜಿಲ್ಲೆಯಿಂದ ಇದುವರೆಗೆ ಕಾಣೆಯಾದವರ ಸಂಖ್ಯೆ 41. ದಕ್ಷಿಣ 24 ಪರಗಣ ಜಿಲ್ಲೆಯ ಒಟ್ಟು 30 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.

ಶನಿವಾರ ಮಧ್ಯಾಹ್ನ 12 ಗಂಟೆಯವರೆಗೆ 70 ಆಂಬ್ಯುಲೆನ್ಸ್‌ಗಳು ಮತ್ತು 34 ವೈದ್ಯರ ತಂಡವನ್ನು ಅಪಘಾತ ಸ್ಥಳಕ್ಕೆ ರಕ್ಷಣಾ ಮತ್ತು ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ರಾಜ್ಯದ ಪ್ರಯಾಣಿಕರನ್ನು ಕರೆತರಲು ಪಶ್ಚಿಮ ಬಂಗಾಳ ಸರ್ಕಾರವು 10 ಬಸ್‌ಗಳನ್ನು ಸ್ಥಳಕ್ಕೆ ಕಳುಹಿಸಿದೆ. ಪಶ್ಚಿಮ ಬಂಗಾಳದಿಂದ 20 ಮಿನಿ ಟ್ರಕ್‌ಗಳ ಮೂಲಕ ವೈದ್ಯಕೀಯ ಪರಿಹಾರವನ್ನು ಕಳುಹಿಸಲಾಗಿದೆ  ಎಂದು ರಾಜ್ಯ ಸಚಿವಾಲಯದಿಂದ ಪತ್ರಿಕಾ ಪ್ರಕಟಣೆ ತಿಳಿಸಿದೆ. 

ಈಮಧ್ಯೆ, ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಗಾಯಗೊಂಡ ಪ್ರತಿಯೊಬ್ಬರ ಕುಟುಂಬ ಸದಸ್ಯರಿಗೆ ಪಕ್ಷದ ಪರವಾಗಿ 2,00,000 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಇನ್ನೊಂದೆಡೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಸರ್ಕಾರದಿಂದ ಸಂತ್ರಸ್ತರಿಗೆ ಐದು ಲಕ್ಷ ರೂಪಾಯಿ ಘೋಷಿಸಿದ್ದಾರೆ.

SCROLL FOR NEXT