ದೇಶ

ಚುನಾವಣಾ ಕಾರ್ಯತಂತ್ರ ರಚನೆಗೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳನ್ನು ಭೇಟಿ ಮಾಡಲಿರುವ ಪ್ರಧಾನಿ

Ramyashree GN

ನವದೆಹಲಿ: ತನ್ನ ಮಿಷನ್ 2024ರ ಭಾಗವಾಗಿ ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳಿಗೆ ಪಕ್ಷದ ಚುನಾವಣಾ ಕಾರ್ಯಸೂಚಿ ಬಗ್ಗೆ ಚರ್ಚಿಸಲು ಬಿಜೆಪಿಯು ತನ್ನ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಸಭೆಯನ್ನು ಜೂನ್ 11-12 ರಂದು ದೆಹಲಿಯಲ್ಲಿ ಕರೆದಿದೆ ಎಂದು ತಿಳಿದುಬಂದಿದೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಕೆಲವೇ ತಿಂಗಳುಗಳ ಅಂತರದಲ್ಲಿ ನಡೆಯಲಿರುವ ಕಾರಣ ಸಭೆಯಲ್ಲಿ ಎರಡೂ ಚುನಾವಣೆಗಳಿಗೆ ಪಕ್ಷದ ಕಾರ್ಯಸೂಚಿಯ ಕುರಿತು ವ್ಯಾಪಕ ಚರ್ಚೆಗಳು ನಡೆಯಲಿವೆ. 

'ನಮಗೆ ತಿಳಿದಿರುವಂತೆ, ಬಿಜೆಪಿ ಪ್ರತಿ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ವ್ಯವಸ್ಥಿತವಾಗಿ ಉತ್ತಮವಾಗಿ ರಚನೆಗೊಂಡ ಚುನಾವಣಾ ತಂತ್ರಗಳನ್ನು ಅನುಸರಿಸುತ್ತದೆ' ಎಂದು ಪಕ್ಷದ ಹಿರಿಯ ಕಾರ್ಯಕಾರಿಯೊಬ್ಬರು ಹೇಳಿದ್ದಾರೆ.

'ನಮಗೆ ರಾಷ್ಟ್ರವೇ ಮೊದಲು ಮತ್ತು ಅಭಿವೃದ್ಧಿ ರಾಜಕೀಯವು ಎಲ್ಲಾ ಚುನಾವಣೆಗಳಲ್ಲಿ ನಮ್ಮ ಪ್ರಮುಖ ವಿಚಾರವಾಗಿರುತ್ತದೆ. ಇದುವೇ ನಮ್ಮ ಚರ್ಚೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ' ಎಂದು ಹಿರಿಯ ನಾಯಕರೊಬ್ಬರು ಹೇಳಿದರು. 

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಪಕ್ಷದ ಪ್ರಮುಖ ತಂತ್ರಜ್ಞ ಅಮಿತ್ ಶಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಮತ್ತು ಪಕ್ಷದ ಇತರ ಪ್ರಧಾನ ಕಾರ್ಯದರ್ಶಿಗಳಂತಹ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಪ್ರಧಾನಿ ಮೋದಿ ಕೂಡ ಸಭೆಯಲ್ಲಿ ಪಾಲ್ಗೊಳ್ಳಬಹುದು. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಜನಕೇಂದ್ರಿತ ಕಲ್ಯಾಣ ಯೋಜನೆಗಳ ಕುರಿತು ತಮ್ಮ ಕಾರ್ಯಕ್ಷಮತೆಯ ವರದಿಗಳನ್ನು ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯು ಮಧ್ಯ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಳ್ಳುವ ತವಕದಲ್ಲಿದೆ. ಜೂನ್ 23 ರಂದು ಪಾಟ್ನಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯನ್ನು ಎದುರಿಸಲು ತನ್ನ ಕಾರ್ಯತಂತ್ರವನ್ನು ಚರ್ಚಿಸಬೇಕಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳು ಚುರುಕುಗೊಂಡಿವೆ. ಬಿಹಾರ ಸಿಎಂ ನಿತೀಶ್ ಕುಮಾರ್ ಎಲ್ಲಾ ವಿಪಕ್ಷಗಳನ್ನು ಒಟ್ಟಿಗೆ ತರುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದ್ದಾರೆ.

SCROLL FOR NEXT