ದೇಶ

ಅಮರನಾಥ ಯಾತ್ರಿಗಳ ಫುಡ್ ಮೆನು ಬಿಡುಗಡೆ; ಯಾತ್ರಾರ್ಥಿಗಳಿಗೆ ಪೂರಿ, ಸಮೋಸಾ, ಪಿಜ್ಜಾ ನೀಡುವಂತಿಲ್ಲ!

Ramyashree GN

ಶ್ರೀನಗರ: ವಾರ್ಷಿಕ ಅಮರನಾಥ ಯಾತ್ರೆಯ ಆರಂಭಕ್ಕೂ ಮುನ್ನ, ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್ಎಎಸ್‌ಬಿ) ಎರಡು ತಿಂಗಳ ಸುದೀರ್ಘ ತೀರ್ಥಯಾತ್ರೆಯ ಸಮಯದಲ್ಲಿ ಯಾತ್ರಿಗಳಿಗೆ ಹಲ್ವಾ, ಪೂರಿ, ಸಮೋಸಾ, ಜಿಲೇಬಿ, ಗುಲಾಬ್ ಜಾಮೂನ್, ಪಿಜ್ಜಾ, ದೋಸೆ, ಕರಿದ ರೊಟ್ಟಿ ಮತ್ತು 'ಇತರ ಜಂಕ್ ಮತ್ತು ಅನಾರೋಗ್ಯಕರ ಆಹಾರ' ನೀಡುವುದನ್ನು ನಿಷೇಧಿಸಿದೆ. 

ಮೊದಲ ಬಾರಿಗೆ, ಎಸ್ಎಎಸ್‌ಬಿ ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲಕ್ಕೆ ತೀರ್ಥಯಾತ್ರೆ ಮಾಡುವ ಯಾತ್ರಿಗಳಿಗೆ ಆಹಾರದ ಮೆನುವನ್ನು ಬಿಡುಗಡೆ ಮಾಡಿದೆ. 62 ದಿನಗಳ ಯಾತ್ರೆಯು ಜುಲೈ 1 ರಂದು ದಕ್ಷಿಣ ಕಾಶ್ಮೀರದ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗದಿಂದ ಮತ್ತು ಮಧ್ಯ ಕಾಶ್ಮೀರದ ಅತ್ಯಂತ ಚಿಕ್ಕದಾದ ಬಾಲ್ಟಾಲ್ ಟ್ರ್ಯಾಕ್‌ನಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 31 ರಂದು ರಕ್ಷಾ ಬಂಧನದಂದು ಯಾತ್ರೆ ಮುಕ್ತಾಯಗೊಳ್ಳಲಿದೆ.

ಆಹಾರ ಮೆನುವಿನ ಪ್ರಕಾರ, ಭಾರಿ ಪಲಾವ್, ಫ್ರೈಡ್ ರೈಸ್, ಪೂರಿ, ಬಾತುರಾ, ಪಿಜ್ಜಾ, ಬರ್ಗರ್, ಪರೋಠ, ದೋಸೆ, ಫ್ರೈಡ್ ರೋಟಿ, ಬೆಣ್ಣೆಯೊಂದಿಗೆ ಬ್ರೆಡ್, ಕ್ರೀಮ್ ಆಧಾರಿತ ಆಹಾರಗಳು, ಉಪ್ಪಿನಕಾಯಿ, ಚಟ್ನಿ, ಕರಿದ ಹಪ್ಪಳ, ಚೌಮೇನ್ ಮತ್ತು ಎಲ್ಲಾ ಇತರ ಕರಿದ/ಫಾಸ್ಟ್ ಫುಡ್‌ಗಳನ್ನು ಈ ವರ್ಷ ಎಸ್‌ಎಎಸ್‌ಬಿ ಸ್ಥಾಪಿಸಿರುವ ಸಮುದಾಯ ಅಡುಗೆಮನೆಗಳಿಂದ (ಲಂಗರ್‌ಗಳು) ಯಾತ್ರಿಗಳಿಗೆ ನೀಡಲಾಗುವುದಿಲ್ಲ.

ಎಸ್‌ಎಎಸ್‌ಬಿ ಪಹಲ್ಗಾಮ್ ಮತ್ತು ಬಾಲ್ಟಾಲ್‌ನ ಅವಳಿ ಯಾತ್ರಾ ಮಾರ್ಗಗಳಲ್ಲಿ ಯಾತ್ರೆಯ ಸಮಯದಲ್ಲಿ ಯಾತ್ರಾರ್ಥಿಗಳಿಗಾಗಿ ಸುಮಾರು 120 ಲಂಗರ್‌ಗಳನ್ನು ಸ್ಥಾಪಿಸಿದೆ. ತಂಪು ಪಾನೀಯಗಳು, ಹಲ್ವಾ, ಜಿಲೇಬಿ, ಗುಲಾಬ್ ಜಾಮೂನ್, ಲಡ್ಡು, ಖೋಯಾ ಬರ್ಫಿ, ರಸಗುಲ್ಲಾ, ಚಿಪ್ಸ್, ಮತ್ತಿ, ಪಕೋಡ, ಸಮೋಸಾ, ಕರಿದ ಡ್ರೈಫ್ರೂಟ್ಸ್‌ ತಿಂಡಿಗಳು ಮತ್ತು ಇತರ ಕರಿದ ತಿಂಡಿಗಳನ್ನು ಮಂಡಳಿಯು ನಿಷೇಧಿಸಿದೆ.

ಇದಲ್ಲದೆ, ಯಾತ್ರಿಗಳಿಗೆ ಮಾಂಸಾಹಾರ, ಮದ್ಯ, ತಂಬಾಕು, ಗುಟ್ಕಾ, ಪಾನ್ ಮಸಾಲಾ, ಸಿಗರೇಟ್ ಮತ್ತು ಇತರ ಅಮಲು ಪದಾರ್ಥಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ಜಂಕ್ ಮತ್ತು ಅನಾರೋಗ್ಯಕರ ಆಹಾರವನ್ನು ನೀಡುವುದರ ಮೇಲೆ ನಿಷೇಧ ಹೇರಿರುವುದು ಇದೇ ಮೊದಲಲ್ಲ. ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವ ಯಾತ್ರಾರ್ಥಿಗಳಿಗೆ ಈ ರೀತಿಯ ಸಲಹೆಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ ಎಂದು ಎಸ್‌ಎಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT