ದೇಶ

ಒಡಿಶಾದಲ್ಲಿ ತ್ರಿವಳಿ ರೈಲು ಅಪಘಾತ: ಮೃತಪಟ್ಟವರ ಸಂಖ್ಯೆ 290ಕ್ಕೆ ಏರಿಕೆ

Sumana Upadhyaya

ಭುವನೇಶ್ವರ: ಮತ್ತೊಬ್ಬ ಗಾಯಾಳು ಸಾವಿನೊಂದಿಗೆ ಒಡಿಶಾ ತ್ರಿವಳಿ ರೈಲು ಅಪಘಾತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 290 ಕ್ಕೆ ಏರಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬಿಹಾರ ನಿವಾಸಿ ಪ್ರಕಾಶ್ ರಾಮ್ ಅವರು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸರ್ಜರಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿನ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪ್ರಕಾಶ್ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. 

ತೀವ್ರವಾಗಿ ಗಾಯಗೊಂಡ ಸುಮಾರು 200 ಮಂದಿಯನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ, ಅವರಲ್ಲಿ ಅನೇಕರು ಬಿಡುಗಡೆಯಾಗಿದ್ದಾರೆ, ಇನ್ನು ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 

ಭುವನೇಶ್ವರದ ಏಮ್ಸ್‌ನಲ್ಲಿ ಸಂರಕ್ಷಿಸಲಾದ 81 ಮೃತದೇಹಗಳ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ತಮ್ಮವರೆಂದು ಹೇಳಿಕೊಂಡು ಬಂದವರು ಡಿಎನ್‌ಎ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಒಟ್ಟು 78 ಕುಟುಂಬಗಳು ಡಿಎನ್‌ಎ ಮಾದರಿಗಳನ್ನು ನೀಡಿವೆ.

ಜೂನ್ 2 ರಂದು ಸಾಯಂಕಾಲ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಚೆನ್ನೈ-ಬೌಂಡ್ ಕೋರಮಂಡಲ್ ಎಕ್ಸ್‌ಪ್ರೆಸ್, ಹೌರಾ-ಬೌಂಡ್ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಅಪಘಾತವಾಗಿದ್ದು 290 ಮಂದಿ ಮೃತಪಟ್ಟಿದ್ದಾರೆ.

SCROLL FOR NEXT