ಗುವಾಹಟಿ: ಅಸ್ಸಾಂನ ಉದಲ್ಗುರಿ ಜಿಲ್ಲೆಯಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಡಕಾಯಿತ ಎಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಲಾಗಿದೆ ಎಂಬುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿ ಡಕಾಯಿತ ಕೆನರಾಮ್ ಬೊರೊ ಅಲಿಯಾಸ್ ಕೆನರಾಮ್ ಬಸುಮತರಿ ಅಲ್ಲ. ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿ ದಿಂಬೇಶ್ವರ್ ಮುಚಹರಿ ಎಂದು ಗುರುತಿಸಲಾಗಿದೆ. ಅವರು ಒಬ್ಬ "ಸಣ್ಣ ರೈತ" ಎಂಬುದು ಸಿಐಡಿ ತನಿಖೆಯಿಂದ ತಿಳಿದುಬಂದಿದೆ.
ಮೃತ ರೈತ ಒಬ್ಬ "ಕಠಿಣ ಅಪರಾಧಿ" ಎಂದು ಪ್ರತಿಪಾದಿಸಿದ್ದ ಅಸ್ಸಾಂ ಪೊಲೀಸರು, ಫೆಬ್ರವರಿ 24 ರಂದು ರೌಟಾ ಪ್ರದೇಶದ ಧನ್ಸಿರಿಖುತಿ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಸಹ ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.
ಅಂತಿಮ ವಿಧಿವಿಧಾನಗಳನ್ನು ನಡೆಸಿ ಶವವನ್ನು ಸಮಾಧಿ ಮಾಡಿದ ನಂತರ, ಮುಚಹರಿಯ ರೈತನ ಕುಟುಂಬ, ಇದು ತಮ್ಮ ಮಗನೆಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾರ್ಚ್ 2 ರಂದು ಸಿಐಡಿ ತನಿಖೆಗೆ ಆದೇಶಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು.
ನಂತರ ಶವವನ್ನು ಹೊರತೆಗೆದು, ಡಿಎನ್ಎ ಪರೀಕ್ಷೆ ನಡೆಸಿದಾಗ ಮೃತ ವ್ಯಕ್ತಿ ಮುಚಹರಿ, ಬೋರೋ ಅಲ್ಲ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.