ಗುವಾಹಟಿ: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹಗೊಂಡಿರುವ ವಿಚಾರ ಅಸ್ಸಾಂ ನ ವಿಧಾನಸಭೆಯಲ್ಲೂ ಸದ್ದು ಮಾಡಿದ್ದು, 3 ಶಾಸಕರು ಅಮಾನತುಗೊಂಡಿದ್ದಾರೆ.
ರಾಹುಲ್ ಅನರ್ಹತೆಯ ವಿಚಾರವಾಗಿ ಚರ್ಚಿಸಲು ಅಸ್ಸಾಮ್ ನ ವಿಧಾನಸಭೆಯಲ್ಲಿ ಕಾಂಗ್ರೆಸ್ ನಿರ್ಣಯ ಮಂಡಿಸಿತ್ತು. ಈ ಚಾರವಾಗಿ ಗದ್ದಲ ಉಂಟಾದ ಪರಿಣಾಮ ಸ್ಪೀಕರ್ ಬಿಸ್ವಜಿತ್ ಡೈಮರಿ ಎರಡು ಬಾರಿ ಸದನದ ಕಲಾಪವನ್ನು ಮುಂದೂಡಿ, ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕಕನ್ನು ಅಮಾನತುಗೊಳಿಸಿದರು.
ಪ್ರಶ್ನೋತ್ತರ ಕಲಾಪ ಆರಂಭದ ಬಳಿಕ ಡೈಮರಿ ವಿಪಕ್ಷ ನಾಯಕ ದೇಬಬ್ರತಾ ಸೈಕಿಯಾ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು.
ಇದನ್ನೂ ಓದಿ: ಸರ್ಕಾರಿ ಬಂಗಲೆ ತೆರವಿಗೆ ಸೂಚನೆ: ದಿಗ್ವಿಜಯ್ ಸಿಂಗ್ ಬೆನ್ನಲ್ಲೇ ರಾಹುಲ್ ಗಾಂಧಿಗೆ ಮನೆ ಆಫರ್ ಮಾಡಿದ ನಿವೃತ್ತ ಸರ್ಕಾರಿ ನೌಕರ!
ವಿಪಕ್ಷ ನಾಯಕ ಮಂಡಿಸಿದ ನಿರ್ಣಯದ ಬಗ್ಗೆ ಸಿಎಂ ಬಿಸ್ವ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ನಾವು ನ್ಯಾಯಾಂಗದ ಬಗ್ಗೆ ಇಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಹಿಂದೆಂದೂ ನಡೆಯದಿರುವ ಘಟನೆಯಾಗಿದೆ. ವಿಧಾನಸಭೆಯಲ್ಲಿ ಗದ್ದಲ ಉಂಟುಮಾಡಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ಗದ್ದಲ ಉಂಟುಮಾಡಲು ಪ್ರಾರಂಭಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು 3 ಶಾಸಕರನ್ನು ಅಮಾನತುಗೊಳಿಸಿದರು.