ಮುಂಬೈ: 'ದಿ ಕೇರಳ ಸ್ಟೋರಿ' ಬಿಡುಗಡೆಯಾದ ದಿನದಿಂದಲೂ ಸಾಕಷ್ಟು ವಿರೋಧವನ್ನು ಎದುರಿಸುತ್ತಿದೆ. ವಿವಾದಾತ್ಮಕ ವಿಷಯದ ಕಾರಣದಿಂದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂತಹ ರಾಜ್ಯಗಳು ಈ ಚಿತ್ರವನ್ನು ನಿಷೇಧಿಸಿವೆ. ಈ ಮಧ್ಯೆ ಎನ್ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಚಿತ್ರದ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಸಿನಿಮಾ ನಿರ್ಮಿಸಿದ್ದಕ್ಕಾಗಿ ಅವರಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ದಿ ಕೇರಳ ಸ್ಟೋರಿ ಕುರಿತಂತೆ ಇಂದು ಪ್ರತಿಕ್ರಿಯಿಸಿರುವ ಅವ್ಹಾದ್, ಈ ಚಿತ್ರದಲ್ಲಿ 32,000 ಕೇರಳದಿಂದ ನಾಪತ್ತೆಯಾದ ಮಹಿಳೆಯರು ಐಎಸ್ ಐಎಸ್ ಉಗ್ರ ಸಂಘಟನೆ ಸೇರುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ವಾಸ್ತವಾಗಿ ಮೂವರು ಮಾತ್ರ ಆ ರೀತಿಯಲ್ಲಿ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಚಿತ್ರ ಕಾಲ್ಪನಿಕ ಕಥೆಯನ್ನು ಹೊಂದಿದ್ದು, ನಿರ್ಮಾಪಕನನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದಿದ್ದಾರೆ.
'ದಿ ಕೇರಳ ಸ್ಟೋರಿ' ವಿರುದ್ಧ ಮಾತನಾಡುತ್ತಿರುವ ಮೊದಲ ರಾಜಕೀಯ ನಾಯಕ ಇವರಲ್ಲ. ಸೋಮವಾರ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ಪಶ್ಟಿಮ ಬಂಗಾಳದಲ್ಲಿ ರಾಜ್ಯದಲ್ಲಿ ವಿವಾದಾತ್ಮಕ ಚಿತ್ರವನ್ನು ನಿಷೇಧಿಸಿತು, ಇದು ಅಶಾಂತಿಯನ್ನು ಉಂಟುಮಾಡಬಹುದು ಎಂದು ಅವರು ವಾದಿಸಿದ್ದಾರೆ.
ಯಾವುದೇ ದ್ವೇಷ ಮತ್ತು ಹಿಂಸಾಚಾರದ ಘಟನೆಯನ್ನು ತಪ್ಪಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ದಿ ಕೇರಳ ಸ್ಟೋರಿಯನ್ನು ಪ್ರದರ್ಶಿಸುವುದನ್ನು ತಕ್ಷಣವೇ ನಿಷೇಧಿಸುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. ನಿಷೇಧ ಉಲ್ಲಂಘಿಸುವ ಯಾವುದೇ ಚಿತ್ರಮಂದಿರದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಆದೇಶಿಸಿದ್ದಾರೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ ವಿವಾದ: ಕಪಿಲ್ ಸಿಬಲ್, ಖುಷ್ಬೂ ಸುಂದರ್ ಟ್ವೀಟ್ ವಾರ್, 'ಸತ್ಯಾಂಶದಿಂದ ಹತಾಶರಾಗಬೇಡಿ' ಎಂದ ನಟಿ!
ಇದಲ್ಲದೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಿತ್ರದ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು 'ಸಂಘ ಪರಿವಾರ"ದ ಪ್ರಚಾರ ಎಂದು ಅವರು ಬಣ್ಣಿಸಿದ್ದಾರೆ. ರಾಜ್ಯದ ವಾಸ್ತವತೆಯ ಒಟ್ಟಾರೆ ಉತ್ಪ್ರೇಕ್ಷೆ ಮತ್ತು ವಿರೂಪ ದಲ್ಲಿ ನಿರ್ಮಾಣಪಕರು ತೊಡಗಿದ್ದಾರೆ ಎಂದು ಶಶಿ ತರೂರ್ ಆರೋಪಿಸಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶನದ ಮತ್ತು ವಿಪುಲ್ ಷಾ ನಿರ್ಮಿಸಿರುವ 'ದಿ ಕೇರಳ ಸ್ಟೋರಿ'' ಕೇರಳದ ಮಹಿಳೆಯರ ಗುಂಪೊಂದು, ಹೇಗೆ ಇಸ್ಲಾಂಗೆ ಮತಾಂತರಗೊಂಡರು ಮತ್ತು ಐಎಸ್ ಐಎಸ್ ಉಗ್ರ ಸಂಘಟನೆ ಸೇರಿದರು ಎಂಬುದನ್ನು ವಿವರಿಸುತ್ತದೆ. ಈ ಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.