ದೇಶ

ಒಡಿಶಾ: ಮತ್ತೆ ನಕ್ಸಲ್ ಎನ್ಕೌಂಟರ್, 3 ಮಾವೋವಾದಿಗಳು ಹತ, ಡಿಎಸ್ ಪಿಗೆ ಗಾಯ

Srinivasamurthy VN

ಭುವನೇಶ್ವರ: ಒಡಿಶಾ ಮತ್ತೊಂದು ನಕ್ಸಲ್ ಎನ್ಕೌಂಟರ್ ನಡೆದಿದ್ದು, ಮೂರು ಮಾವೋವಾದಿಗಳನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಭದ್ರತಾ ಪಡೆಗಳು ಮತ್ತು ಎಡಪಂಥೀಯ ಉಗ್ರಗಾಮಿಗಳ (ಎಲ್‌ಡಬ್ಲ್ಯುಇ) ನಡುವೆ ಇಂದು ಗುಂಡಿನ ಕಾಳಗ ನಡೆದಿದ್ದು, ಒಡಿಶಾದ ಕಲಹಂಡಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಅಂತೆಯೇ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

LWEಗಳ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿರುವಾಗ ನಸುಕಿನ ವೇಳೆಯಲ್ಲಿ ಶೂಟೌಟ್ ನಡೆಯಿತು. ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಸುನಿಲ್ ಕೆ ಬನ್ಸಾಲ್ ಮಂಗಳವಾರ ತಿಳಿಸಿದ್ದಾರೆ.

ಗಾಯಗೊಂಡ ಡಿಎಸ್‌ಪಿಯನ್ನು ಬೋಲಂಗಿರ್‌ನಲ್ಲಿರುವ ಸರ್ಕಾರಿ ಭೀಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಕಾಳಹಂಡಿ-ಕಂಧಮಾಲ್ ಜಿಲ್ಲೆಗಳ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಏಪ್ರಿಲ್ 26 ರಂದು ಛತ್ತೀಸ್‌ಗಢ ನಕ್ಸಲ್ ದಾಳಿಯಲ್ಲಿ ಹತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 11 ಜನರನ್ನು ಗುಂಡಿಕ್ಕಿ ಹತ್ಯೆಗೈದ ಹಿನ್ನೆಲೆಯಲ್ಲಿ, ಒಡಿಶಾ ಪೊಲೀಸರು ಈ ಪ್ರದೇಶಗಳಲ್ಲಿ ನಕ್ಸಲ್ ಆಕ್ರಮಣವನ್ನು ನಿರೀಕ್ಷಿಸಿ ಕಲಹಂಡಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಅಂತೆಯೇ ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ರಾಜ್ಯ ಅಸೆಂಬ್ಲಿಯಲ್ಲಿ ಮಂಡಿಸಿದ ಶ್ವೇತಪತ್ರದ ಪ್ರಕಾರ, 2021 ಕ್ಕೆ ಹೋಲಿಸಿದರೆ 2022 ರಲ್ಲಿ ಮಾವೋವಾದಿ ಚಟುವಟಿಕೆಗಳು ಅಥವಾ ಎಲ್‌ಡಬ್ಲ್ಯೂಇನಲ್ಲಿ ಒಡಿಶಾವು ಅಲ್ಪ ಪ್ರಮಾಣದ ಕುಸಿತವನ್ನು ಕಂಡಿದೆ ಎಂಬುದನ್ನು ಇಲ್ಲಿ ಗಮನಿಸುವುದು ಸೂಕ್ತವಾಗಿದೆ.

2022 ರಲ್ಲಿ, ರಾಜ್ಯದಾದ್ಯಂತ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಏಳು ಕಾನೂನುಬಾಹಿರ ಸಂಘಟನೆಗಳ ಮಾವೋವಾದಿಗಳು ಹತರಾಗಿದ್ದು, ರಾಜ್ಯವು ಮಾವೋವಾದಿಗಳನ್ನು ಒಳಗೊಂಡ 27 ಹಿಂಸಾಚಾರದ ಪ್ರಕರಣಗಳನ್ನು ದಾಖಲಿಸಿದೆ, ಇದರಲ್ಲಿ ಏಳು ಕೆಂಪು ಬಂಡುಕೋರರು ಕೊಲ್ಲಲ್ಪಟ್ಟಿದ್ದರೆ, ಇತರೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಷ್ಠ ಎಂಟು ನಾಗರಿಕರು ಮತ್ತು ಮೂವರು ಭದ್ರತಾ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದು,  ಮತ್ತು 2022 ರಲ್ಲಿ ಮೂವರು ಮಾವೋವಾದಿಗಳು ಶರಣಾಗಿದ್ದಾರೆ. 

SCROLL FOR NEXT