ದೇಶ

ಕರ್ನಾಟಕದ ಮತದಾರರು 'ದ್ವೇಷ'ವನ್ನು ತಿರಸ್ಕರಿಸಿ, 'ಅಭಿವೃದ್ಧಿಗೆ' ಮತ ನೀಡಿ; ತೆಲಂಗಾಣದ ಮುಖ್ಯಮಂತ್ರಿ ಪುತ್ರಿ ಮನವಿ

Ramyashree GN

ಹೈದರಾಬಾದ್: ಕರ್ನಾಟಕದ ಮತದಾರರು ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಅವರು ಬುಧವಾರ ಯಾವುದೇ ಪಕ್ಷವನ್ನು ಉಲ್ಲೇಖಿಸದೆ ಮನವಿ ಮಾಡಿದರು.

'ಪ್ರಿಯ ಕರ್ನಾಟಕ, ದ್ವೇಷವನ್ನು ತಿರಸ್ಕರಿಸಿ! ಅಭಿವೃದ್ಧಿ, ಸಮೃದ್ಧಿ ಮತ್ತು ಸಮಾಜ ಮತ್ತು ಜನರ ಯೋಗಕ್ಷೇಮಕ್ಕಾಗಿ ಮತ ಚಲಾಯಿಸಿ' ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.

ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆಯನ್ನು ಹೊಂದಿದ್ದ ಬಿಆರ್‌ಎಸ್, ತನ್ನ ಮಿತ್ರ ಪಕ್ಷವಾದ ಜೆಡಿಎಸ್ ಕಣದಲ್ಲಿರುವುದರಿಂದ ಮತ್ತು ಚುನಾವಣೆಯ ಪೂರ್ವ ತಯಾರಿಗೆ ಸಾಕಷ್ಟು ಸಮಯದ ಕೊರತೆ ಇರುವುದರಿಂದ ಮುಂದುವರಿಯದಿರಲು ನಿರ್ಧರಿಸಿದೆ ಎಂದು ಬಿಆರ್‌ಎಸ್ ಮೂಲಗಳು ಈ ಹಿಂದೆ ಸೂಚಿಸಿದ್ದವು.

ಕಳೆದ ವರ್ಷ ಟಿಆರ್‌ಎಸ್ ಹೆಸರನ್ನು ಬಿಆರ್‌ಎಸ್ ಎಂದು ಬದಲಾಯಿಸುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಭಾಗವಹಿಸಿದ್ದರು.

SCROLL FOR NEXT