ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಡೆಯಾದ ಚೀನಾದ ಮೀನುಗಾರಿಕಾ ಹಡಗಿನ ರಕ್ಷಣೆಗೆ ಧಾವಿಸಿದ ಭಾರತದ ಕ್ರಮವನ್ನು ಚೀನಾ ಮುಕ್ತಕಂಠದಿಂದ ಶ್ಲಾಘಿಸಿದೆ.
ಹೌದು.. ಮಧ್ಯ ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಡೆಗೊಂಡ ಚೀನಾದ ಮೀನುಗಾರಿಕಾ ಹಡಗಿನಲ್ಲಿದ್ದ 39 ಜನರ ರಕ್ಷಣೆಗೆ ಧಾವಿಸಿದ ಭಾರತದ ನಡೆಯನ್ನು ಚೀನಾ ಪ್ರಶಂಸಿಸಿದೆ. ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ಈ ಬಗ್ಗೆ ಟ್ವೀಟ್ ಮೂಲಕ ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ‘ಭಾರತದಿಂದ ಸಿಕ್ಕ ಸಕಾಲಿಕ ಸಹಾಯವನ್ನು ನಿಜಕ್ಕೂ ಪ್ರಶಂಸಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ 39 ಜನರಿದ್ದ ಚೀನಾ ಹಡಗು ಮುಳುಗಡೆ: ಮಾನವೀಯ ದೃಷ್ಟಿಯಿಂದ ಸಹಾಯಕ್ಕೆ ಧಾವಿಸಿದ ಭಾರತ!
ಚೀನಾದ ಮೀನುಗಾರಿಕಾ ಹಡಗಿನ ಹುಡುಕಾಟ ಮತ್ತು ರಕ್ಷಣೆಗಾಗಿ P-8I ಕಡಲ ಗಸ್ತು ವಿಮಾನವನ್ನು ಭಾರತೀಯ ಸೇನೆ ನಿಯೋಜಿಸಿದೆ. ಈಗಾಗಲೇ ನೌಕಾಪಡೆಯ ಸಾಕಷ್ಟು ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮೀನುಗಾರಿಕಾ ಹಡಗಿನಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿತ್ತು. ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿಕೊಂಡಿರುವ ರಾಯಭಾರ ಕಚೇರಿ ಪ್ರಶಂಸೆ ವ್ಯಕ್ತಪಡಿಸಿದೆ.
ಇನ್ನೊಂದೆಡೆ, ಮುಳುಗಡೆಯಾದ ಮೀನುಗಾರಿಕಾ ಹಡಗು ‘ಲುಪೆಂಗ್ ಯುವಾನ್ಯು 028’ನಲ್ಲಿದ್ದ 39 ಜನರ ಪೈಕಿ ಇಬ್ಬರ ಸಾವನ್ನು ಚೀನಾದ ಸಾರಿಗೆ ಇಲಾಖೆ ಗುರುವಾರ ದೃಢಪಡಿಸಿದೆ. ಹಡಗಿನಲ್ಲಿ 17 ಚೀನೀಯರು, ಇಂಡೋನೇಷಿಯಾದ 17 ಮಂದಿ ಮತ್ತು ಐದು ಫಿಲಿಪೈನ್ ನಾವಿಕರು ಸೇರಿದಂತೆ 39 ಜನರಿದ್ದರು ಎನ್ನಲಾಗಿದೆ.
ಚೀನಾದ ನೌಕಾಪಡೆಯ ಮೂರು ಹಡಗುಗಳು ಮತ್ತು ಒಂದು ವಿದೇಶಿ ಹಡಗು ಸೇರಿದಂತೆ 10 ಹಡಗುಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮತ್ತಷ್ಟು ಹಡಗುಗಳು ಆಗಮಿಸಲಿವೆ ಎಂದು ಸಚಿವಾಲಯ ತಿಳಿಸಿದೆ ಎಂದು ಸರ್ಕಾರಿ ವಾಹಿನಿ ‘ಕ್ಸಿನ್ಹುವಾ’ ವರದಿ ಮಾಡಿದೆ.