ನವದೆಹಲಿ: ಇದೇ ತಿಂಗಳ 28 ರಂದು ನಡೆಯಲಿರುವ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್, ಎಡಪಕ್ಷ, ಟಿಎಂಸಿ ಸೇರಿದಂತೆ 19 ವಿಪಕ್ಷಗಳು ಬಹಿಷ್ಕರಿಸಿವೆ. ಪ್ರಧಾನಿ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದು, ರಾಷ್ಟ್ರಪತಿಗಳು ಸಂಸತ್ ಭವನ ಉದ್ಘಾಟನೆ ಮಾಡದೇ ಇರುವುದನ್ನು ವಿಪಕ್ಷಗಳು ರಾಷ್ಟ್ರಪತಿಗಳ ಹುದ್ದೆಗೆ ಮಾಡಿದ ಅವಮಾನ ಎಂದು ಆರೋಪಿಸಿವೆ.
ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸುತ್ತಿರುವುದೇಕೆ?: 19 ವಿಪಕ್ಷಗಳು ನೀಡಿರುವ ವಿವರಣೆ ಹೀಗಿದೆ...
ಆದರೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷ ಅಧಿಕೃತವಾಗಿ ಹೇಳಿಕೆ ನೀಡಿದೆ. ಈ ಸಾಂವಿಧಾನಿಕ ಸಂಸ್ಥೆಗಳು ( ರಾಷ್ಟ್ರಪತಿ ಮತ್ತು ಸಂಸತ್) ತಮ್ಮ ಪಾವಿತ್ರ್ಯತೆ ಮತ್ತು ಗೌರವದ ಮೇಲೆ ಪರಿಣಾಮ ಬೀರುವ ಯಾವುದೇ ವಿಷಯಕ್ಕಿಂತ ದೊಡ್ಡದಾಗಿವೆ ಎಂದು ಬಿಜೆಡಿ ನಂಬುತ್ತದೆ. ಅಂತಹ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬಹುದು. ಆದ್ದರಿಂದ ನೂತನ ಸಂಸತ್ ಉದ್ಘಾಟನೆಯ ಮಹತ್ವದ ಸಂದರ್ಭದಲ್ಲಿ ಭಾಗವಹಿಸುವುದಾಗಿ ಪಕ್ಷದ ರಾಷ್ಟ್ರೀಯ ವಕ್ತಾರ ಡಾ. ಎಸ್. ಪಾತ್ರಾ ಪತ್ರದ ಮೂಲಕ ತಿಳಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ಅಂಶವೆಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡುವ ನಿಟ್ಟಿನಲ್ಲಿ ವಿಪಕ್ಷಗಳ ಮೈತ್ರಿಕೂಟ ರಚನೆಗೆ ಪ್ರಯತ್ನಿಸುತ್ತಿರುವ ಪಕ್ಷಗಳೆಲ್ಲಾ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿವೆ.
ಬಿಜೆಡಿ ಪಕ್ಷವನ್ನು ಈ ಕೂಟಕ್ಕೆ ಸೆಳೆಯುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಮಾತುಕತೆ ಕೂಡಾ ನಡೆಸಿದ್ದರು. ಆದರೆ, ನವೀನ್ ಪಟ್ನಾಯಕ್ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಸಂಸತ್ ನೂತನ ಭವನ ಉದ್ಘಾಟನೆ ವಿಷಯದಲ್ಲೂ ಅವರು ಬಿಜೆಪಿ ಬೆಂಬಲಿಸುವ ಮೂಲಕ ವಿಪಕ್ಷಗಳ ಮೈತ್ರಿಕೂಟ ರಚನೆಯಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.