ದೇಶ

ರಾಜಸ್ಥಾನದ ಈ ತ್ರಿಪುರ ಸುಂದರಿ ದೇವಾಲಯ ಚುನಾವಣೆ ವೇಳೆ ಎಲ್ಲರ ನೆಚ್ಚಿನ ತಾಣ!

Srinivas Rao BV

ಜೈಪುರ: ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಾನ್ಸ್ವಾರಾ ಜಿಲ್ಲೆ ಎಲ್ಲರ ಗಮನದ ಕೇಂದ್ರಬಿಂದುವಾಗಿದೆ.

ಹಲವು ರಾಜಕಾರಣಿಗಳು ಜಿಲ್ಲೆಗೆ ಆಗಮಿಸಿ ದೈವೀ ಕೃಪೆಗೆ ಪಾತ್ರರಾಗಲು ಹವಣಿಸುತ್ತಿದ್ದಾರೆ. ಮಾಜಿ ಸಿಎಂ ವಸುಂಧರಾ ರಾಜೆ ಇಲ್ಲಿನ ತ್ರಿಪುರ ಸುಂದರಿ ದೇವಾಲಯದ ಪರಮ ಭಕ್ತೆಯಾಗಿದ್ದು, ಇಲ್ಲಿರುವುದು ಸಾಮ್ರಾಜ್ಯ ಅಥವಾ ಅಧಿಕಾರ ಪ್ರಾಪ್ತಿಗೆ ನೆರವು ನೀಡುವ ದೇವತೆ ಎಂದೇ ನಂಬಿದ್ದಾರೆ.

ಕೇವಲ ವಸುಂಧರಾ ರಾಜೆ ಅಷ್ಟೇ ಅಲ್ಲದೇ ಗ್ರಾಮಪಂಚಾಯತ್ ಮಟ್ಟದ ರಾಜಕಾರಣಿಗಳಿಂದ ಹಿಡಿದು ಸಚಿವರುಗಳೂ ಸಹ ಉಮ್ರೈ ಗ್ರಾಮದಲ್ಲಿರುವ ಈ ತ್ರಿಪುರ ಸುಂದರಿ ದೇವಾಲಯವನ್ನು ದರ್ಶಿಸುತ್ತಿದ್ದಾರೆ.

ಸಾಮ್ರಾಜ್ಯ ಪ್ರಾಪ್ತಿಗಾಗಿ ಪ್ರಾರ್ಥಿಸುವ ಭಕ್ತಾದಿಗಳಿಗೆ ಮಾತೆ ತ್ರಿಪುರ ಸುಂದರಿ ಸಹಾಯ ಮಾಡುತ್ತಾರೆ ಅದಕ್ಕಾಗಿಯೇ ವಿಧಾನಸಭಾ ಚುನಾವಣೆ ವೇಳೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ದೇವಾಲಯದ ಅರ್ಚಕರಾದ ನಿಕುಂಜ್ ಮೋಹನ್ ಪಾಂಡ್ಯ ಹೇಳಿದ್ದಾರೆ.

ರಾಜಸ್ಥಾನದ ಹಲವು ರಾಜರು ನಿರ್ಣಾಯಕ ಯುದ್ಧಗಳ ಸಂದರ್ಭದಲ್ಲಿ ಇಲ್ಲಿಗೆ ಬಂದು ಪ್ರಾರ್ಥಿಸುತ್ತಿದ್ದರು ಎಂದೂ ಪಾಂಡ್ಯ ಮಾಹಿತಿ ನೀಡಿದ್ದಾರೆ.

ಆಗಾಗ್ಗೆ ದೇವಸ್ಥಾನಕ್ಕೆ ಭೇಟಿ ನೀಡುವ ರಾಜೇ ಅವರು 2013 ರ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಸಂಪೂರ್ಣ ಅವಧಿಯವರೆಗೆ ದೇವಸ್ಥಾನದ ಒಳಗೆಯೇ ಇದ್ದರು, ಮತ್ತು ಫಲಿತಾಂಶಗಳು ಪ್ರಕಟವಾಗುವವರೆಗೆ ಅಲ್ಲಿಯೇ ಇದ್ದರು. ಆ ಚುನಾವಣೆಯಲ್ಲಿ ಅವರು ಅಧಿಕಾರಕ್ಕೇರಿದರು ಎಂಬುದು ಗಮನಾರ್ಹ ಅಂಶವಾಗಿದೆ. ಈ ವರ್ಷ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಹಲವು ರಾಜ್ಯ ಸಚಿವರು ಸಹ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

SCROLL FOR NEXT