ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹವಾಮಾನ (WEATHER) ಮತ್ತಷ್ಟು ಹದಗಟ್ಟಿದ್ದು, ಗಾಳಿಗುಣಮಟ್ಟ 'ತೀವ್ರ ಕಳಪೆ' ಮಟ್ಟದಲ್ಲಿ ಮುಂದುವರೆದ ಪರಿಣಾಮ ಶಾಲಾ-ಕಾಲೇಜುಗಳಿಗೆ ತಾತ್ಕಾಲಿಕ ರಜೆ ಘೋಷಣೆ ಮಾಡಲಾಗಿದೆ.
ಹೌದು.. ದೆಹಲಿಯಲ್ಲಿ ಈ ಬಾರಿ ದೀಪಾವಳಿಗೂ ಮುನ್ನವೇ ಗಾಳಿ ಗುಣಮಟ್ಟ ತೀರಾ ಹದಗೆಟ್ಟಿದ್ದು, ಉಸಿರುಗುಟ್ಟುವ ಕಳಪೆ ವಾಯು (Delhi pollution) ಗುಣಮಟ್ಟದಿಂದಾಗಿ ವಾಯು ತುರ್ತುಸ್ಥಿತಿಯನ್ನು (Air emergency) ಘೋಷಿಸಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ (Air pollution) ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಘೋಷಿಸಿದ್ದಾರೆ.
ಅನಿವಾರ್ಯವಲ್ಲದ ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ದೆಹಲಿ ಸರ್ಕಾರ ತಡೆ ಹಾಕಿದ್ದು, ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಷೇಧ ಹೇರಿದೆ. ಹವಾಮಾನ ಇಲಾಖೆಯ ಪ್ರಕಾರ ಶುಕ್ರವಾರ ಬೆಳಿಗ್ಗೆ, ದೆಹಲಿಯ ಒಟ್ಟಾರೆ AQI ʼಅತ್ಯಂತ ಕಳಪೆ’ ವಿಭಾಗದಲ್ಲಿ 346ನಲ್ಲಿ ದಾಖಲಾಗಿದೆ.
ಇನ್ನು ರಸ್ತೆ ಸ್ವಚ್ಛತೆ ವೇಳೆ ಏಳುವ ಧೂಳಿನ ಕಣಗಳ ನಿಯಂತ್ರಣಕ್ಕೆ ಸರ್ಕಾರ ರಸ್ತೆಗಳ ಮೇಲೆ ಮೊದಲು ನೀರು ಚುಮುಕಿಸಿ ಬಳಿಕ ರಸ್ತೆ ಸ್ವಚ್ಛ ಮಾಡುವ ಕಾರ್ಯ ಮಾಡುತ್ತಿದೆ. ಇದರಿಂದ ಧೂಳಿನಕಣಗಳು ಏಳದಂತೆ ಎಚ್ಚರವಹಿಸಲಾಗುತ್ತಿದೆ. ಸರ್ಕಾರವು ರಸ್ತೆಗಳ ಯಾಂತ್ರೀಕೃತ ಗುಡಿಸುವ ಆವರ್ತನವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳಿದೆ. ಅಂತೆಯೇ ಜನರು ತಮ್ಮ ವಾಹನಗಳನ್ನು ಬಿಟ್ಟು ಸಾಮೂಹಿಕ ಸಾರಿಗೆ ಮೂಲ ಬಳಸಲು ದೆಹಲಿ ಮೆಟ್ರೋ (DELHI METRO TRAIN) 20 ಹೆಚ್ಚುವರಿ ರೈಲು ಗಳನ್ನು ಓಡಿಸುತ್ತಿದೆ. ಜನರು ಮೆಟ್ರೋವನ್ನು ಬಳಸಲು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: Bengaluru air pollution: ದೆಹಲಿ ಹಾದಿಯಲ್ಲಿ ಬೆಂಗಳೂರು? ಗಾಳಿಯ ಗುಣಮಟ್ಟದಲ್ಲಿ ಕುಸಿತ; ಹವಾಮಾನ ವರದಿ
ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ ಹಿನ್ನೆಲೆಯಲ್ಲಿ ಗುರುಗ್ರಾಮ್ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಕೂಡ ಶುಕ್ರವಾರದಿಂದ ಪ್ರಾರಂಭವಾಗುವ GRAP III ನಿರ್ಬಂಧಗಳ ಅಡಿಯಲ್ಲಿ ಬರುತ್ತವೆ.