ದೇಶ

ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ಪೀಠ ಸ್ಥಾಪಿಸಿ; ಹೈಕೋರ್ಟ್‌ಗಳಿಗೆ 'ಸುಪ್ರೀಂ' ಸೂಚನೆ

Ramyashree GN

ನವದೆಹಲಿ: ಮಹತ್ವದ ತೀರ್ಪಿನಲ್ಲಿ, ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿಶೇಷ ಪೀಠವನ್ನು ಸ್ಥಾಪಿಸಲು ಮತ್ತು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಲು ಸುಪ್ರೀಂ ಕೋರ್ಟ್ ಗುರುವಾರ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.

ಶಾಸಕರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಈ ಸಂಬಂಧ ನಿರ್ದೇಶನಗಳನ್ನು ನೀಡಿದೆ.

ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಚಾರಣಾ ನ್ಯಾಯಾಲಯಗಳಿಗೆ ಏಕರೂಪದ ಮಾರ್ಗಸೂಚಿಗಳನ್ನು ರೂಪಿಸುವುದು ಕಷ್ಟಕರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಶಾಸಕರ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಮೇಲ್ವಿಚಾರಣೆ ಮಾಡಲು ಹೈಕೋರ್ಟ್‌ಗಳು ಮುಖ್ಯ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಅಥವಾ ಮುಖ್ಯ ನ್ಯಾಯಾಧೀಶರು ಗೊತ್ತುಪಡಿಸಿದ ಪೀಠದ ನೇತೃತ್ವದಲ್ಲಿ ವಿಶೇಷ ಪೀಠವನ್ನು ಸ್ಥಾಪಿಸುತ್ತವೆ ಎಂದು ಮಹತ್ವದ ತೀರ್ಪು ಹೇಳಿದೆ.

ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಸ್ಥಿತಿಗತಿಗಳ ಕುರಿತು ವರದಿಯನ್ನು ಉಚ್ಚ ನ್ಯಾಯಾಲಯಗಳು ವಿಶೇಷ ಕೆಳ ನ್ಯಾಯಾಲಯಗಳಿಂದ ಕೇಳಿ ಪಡೆಯಬಹುದು ಎಂದು ಅದು ಹೇಳಿದೆ.

'ವಿಚಾರಣಾಧೀನ ನ್ಯಾಯಾಲಯಗಳು ಅಪರೂಪದ ಮತ್ತು ಬಲಿಷ್ಟವಾದ ಕಾರಣಗಳನ್ನು ಹೊರತುಪಡಿಸಿ ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಮುಂದೂಡುವಂತಿಲ್ಲ' ಎಂದು ಅದು ಹೇಳಿದೆ. 

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಒಳಪಡಿಸಲು ಗೊತ್ತುಪಡಿಸಿದ ವಿಶೇಷ ಪೀಠಗಳಿಗೆ ಸಾಕಷ್ಟು ಮೂಲಸೌಕರ್ಯ, ತಾಂತ್ರಿಕ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಿಜೆಐ ತೀರ್ಪು ಪ್ರಕಟಿಸುವಾಗ ಹೇಳಿದರು.

ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧ ಸಾಬೀತಾದ ನಂತರ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧವನ್ನು ಕೋರಿ, ಆರೋಪಿ ಶಾಸಕರ ಪ್ರಕರಣದ ತ್ವರಿತ ವಿಚಾರಣೆ ಮತ್ತು ಈ ಉದ್ದೇಶಕ್ಕಾಗಿ ದೇಶದಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಯಂತಹ ಕ್ರಮಗಳನ್ನು ಕೋರಿ ವಕೀಲ ಅಶ್ವನಿ ದುಬೆ ಮೂಲಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು.

SCROLL FOR NEXT