ದೇಶ

ಉತ್ತರಕಾಶಿ ಸುರಂಗ ಕುಸಿತ: ಪೈಪ್ ಮೂಲಕ ಹೊರಬರಲು ಪ್ರತಿ ಕಾರ್ಮಿಕನಿಗೆ 5 ನಿಮಿಷ ಬೇಕು- NDMA

Lingaraj Badiger

ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗ ಕುಸಿತದಿಂದ ಒಳಗಡೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಅಂತಿಮ ಘಟ್ಟ ತಲುಪಿದ್ದು, ಇನ್ನು ಕೆಲವು ಗಂಟೆಗಳಲ್ಲೇ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

"ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕಾರ್ಮಿಕರನ್ನು ಕರೆತರುವ ಮುನ್ನ ಯಾವುದೇ ಘೋಷಣೆಗಳನ್ನು ಮಾಡುವುದಿಲ್ಲ. ಇದು ಎಲ್ಲಾ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ನಾವು ಕಾರ್ಮಿಕರನ್ನು ರಕ್ಷಿಸುವ ಜನರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ...ನಮಗೆ ಯಾವುದೇ ಆತುರ ಇಲ್ಲ..." ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) ಮಂಗಳವಾರ ತಿಳಿಸಿದೆ. 

ಕಾರ್ಮಿಕರನ್ನು ತಲುಪಲು ಪೈಪ್ ಅನ್ನು ಇನ್ನೂ ಎರಡು ಮೀಟರ್‌ ತಳ್ಳಬೇಕಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ಪ್ರಗತಿಯ ಹಂತದಲ್ಲಿದೆ ಎಂದು ಎನ್‌ಡಿಎಂಎ ಸದಸ್ಯ ಲೆ. ಜನರಲ್ ಸೈಯದ್ ಅತಾ ಹಸನೈನ್ ಅವರು ಹೇಳಿದ್ದಾರೆ.

ಇಂದು ಸಂಜೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ನೀಡಿದ ಸೈಯದ್ ಅವರು, ಒಟ್ಟು 58 ಮೀಟರ್ ಕೊರೆಯುವಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಎರಡು ಮೀಟರ್ ಕೊರೆಯುವ ಮೂಲಕ ರಕ್ಷಣಾ ಪೈಪ್ ಅನ್ನು ಎರಡು ಮೀಟರ್‌ಗಳಷ್ಟು ಸಿಕ್ಕಿಬಿದ್ದ ಕಾರ್ಮಿಕರ ಕಡೆಗೆ ತಳ್ಳಬೇಕಾಗಿದೆ ಎಂದು ತಿಳಿಸಿದರು.

"ನಾವು ಕಾರ್ಮಿಕರ ಸಮೀಪದಲ್ಲಿದ್ದೇವೆ. ಆದರೆ ಇನ್ನೂ ಅವರನ್ನು ತಲುಪಿಲ್ಲ. ಸಿಕ್ಕಿಬಿದ್ದ ಕಾರ್ಮಿಕರು ಯಂತ್ರಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ" ಎಂದು ಅವರು ಹೇಳಿದರು 

ಒಮ್ಮೆ ಕಾರ್ಮಿಕರನ್ನು ತಲುಪಿದ ನಂತರ, ಸಿಕ್ಕಿಬಿದ್ದ ಎಲ್ಲಾ ಕಾರ್ಮಿಕರನ್ನು ಹೊರತರಲು 3-4 ಗಂಟೆಗಳು ಬೇಕಾಗುತ್ತದೆ. ಪೈಪ್ ಮೂಲಕ ಚಕ್ರದ ಸ್ಟ್ರೆಚರ್‌ನಲ್ಲಿ ಪ್ರತಿ ಕಾರ್ಮಿಕನನ್ನು ಹೊರತೆಗೆ ಕರೆತರಲು ಸುಮಾರು 3-5 ನಿಮಿಷ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT