ಕಾನ್ಪುರ: 15 ರೂಪಾಯಿ ಮೌಲ್ಯದ ಸಿಗರೇಟಿನ ವಿಚಾರವಾಗಿ ಸ್ಥಳೀಯ ಅಂಗಡಿಯೊಂದರ ಮಾಲೀಕರ ಮೇಲೆ ಬಿಜೆಪಿ ಕೌನ್ಸಿಲರ್ ಮತ್ತು ಅವರ ಸಹಚರರು ಇಲ್ಲಿ ಹಲ್ಲೆ ನಡೆಸಿದ್ದಾರೆ.
ಭವಾನಿ ಶಂಕರ್ ಮತ್ತು ಆತನ ಸಹಚರರು ಅಂಗಡಿಯ ವೃದ್ಧ ಮಾಲೀಕನನ್ನು ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಮೊಬೈಲ್ನಲ್ಲಿ ರೆಕಾರ್ಡ್ ಆಗಿರುವ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ವರದಿಗಳ ಪ್ರಕಾರ, ಕಾನ್ಪುರದ ಚಕೇರಿಯಲ್ಲಿರುವ ಅಜಯ್ ರಾಯ್ ಗುಪ್ತಾ ಅವರ ಪಾನ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ಅಲ್ಲಿಗೆ ಬಂದ ಬಿಜೆಪಿ ಕೌನ್ಸಿಲರ್ ಶಂಕರ್ ಮತ್ತು ಅವರ ಬೆಂಬಲಿಗರು 30 ರೂಪಾಯಿ ಮೌಲ್ಯದ ಸಿಗರೇಟ್ ಖರೀದಿಸಿದ್ದಾರೆ. ಆದರೆ, ಕೇವಲ 15 ರೂ. ಪಾವತಿಸಿದ್ದಾರೆ.
ಉಳಿದ ಹಣ ನೀಡುವಂತೆ ಅಂಗಡಿಯವರು ಕೇಳಿದಾಗ ಶಂಕರ್ ಮತ್ತು ಆತನ ಸಹಚರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ವೃದ್ಧ ತನ್ನ ಹಣ ನೀಡುವಂತೆ ಕೇಳಿದ್ದಕ್ಕೆ ಗಾಂಜಾ ಮಾರಾಟ ಮಾಡಿದ್ದಕ್ಕಾಗಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ; ಹೆಚ್ಚಿನ ಹಣ ನೀಡಲು ನಿರಾಕರಿಸಿದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಬಾಯಿಗೆ ಮೂತ್ರ ವಿಸರ್ಜನೆ!
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕೌನ್ಸಿಲರ್ ವೃದ್ಧನೊಂದಿಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಅವರು ಪೊಲೀಸ್ ಠಾಣೆಯಲ್ಲಿ ಪರಸ್ಪರ ಒಪ್ಪಂದಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಯಾರೊಬ್ಬಕೂ ಯಾವುದೇ ದೂರು ದಾಖಲಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಎರಡೂ ಕಡೆಯವರನ್ನು ಠಾಣೆಗೆ ಕರೆಸಿಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ಪರಸ್ಪರ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾಗಿ ಸೂಚಿಸಿದ್ದಾರೆ.