ದೇಶ

ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಮತ್ತಷ್ಟು ನಾಯಕರ ಬಂಧನ: ದೆಹಲಿ ಸಿಎಂ ಕೇಜ್ರಿವಾಲ್

Lingaraj Badiger

ನವದೆಹಲಿ: ಎಎಪಿ ಹಿರಿಯ ನಾಯಕ ಸಂಜಯ್ ಸಿಂಗ್ ಅವರ ಬಂಧನ "ಸಂಪೂರ್ಣ ಕಾನೂನುಬಾಹಿರ" ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, 2024 ರ ಲೋಕಸಭೆ ಚುನಾವಣೆಗೆ ಮುನ್ನ ಮತ್ತಷ್ಟು ವಿರೋಧ ಪಕ್ಷದ ನಾಯಕರನ್ನು ಬಂಧಿಸುತ್ತಾರೆ ಎಂದು ಬುಧವಾರ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರ ಮನೆ ಮೇಲೆ ಇಂದು ಬೆಳಗ್ಗೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯ(ಇಡಿ), ಸಂಜೆ ಅವರನ್ನು ಬಂಧಿಸಿದೆ.

"ಸಂಜಯ್ ಸಿಂಗ್ ಅವರ ಬಂಧನವು ಸಂಪೂರ್ಣವಾಗಿ ಕಾನೂನುಬಾಹಿರ. ಇದು(ಪ್ರಧಾನಿ ನರೇಂದ್ರ) ಮೋದಿ ಜಿ ಅವರ ಭಯವನ್ನು ತೋರಿಸುತ್ತದೆ. ಅವರು ಇನ್ನೂ ಅನೇಕ ವಿರೋಧ ಪಕ್ಷದ ನಾಯಕರನ್ನು ಚುನಾವಣೆಯವರೆಗೆ ಬಂಧಿಸುತ್ತಾರೆ" ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕು ಮುನ್ನ ಸಂಜಯ್ ಸಿಂಗ್ ನಿವಾಸದ ಮೇಲೆ ಇಡಿ ದಾಳಿ 2024 ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಲ್ಲಿರುವ ಕೇಸರಿ ಪಕ್ಷದ "ಕೊನೆಯ ಹತಾಶ ಪ್ರಯತ್ನ" ಎಂದು ಕೇಜ್ರಿವಾಲ್ ಟೀಕಿಸಿದ್ದರು.

ಇಂತಹ ಹಲವು ದಾಳಿಗಳು ನಡೆಯುತ್ತವೆ. ಆದರೆ ಭಯಪಡುವಂಥದ್ದೇನೂ ಇಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹೇಳಿದ್ದಾರೆ.

SCROLL FOR NEXT