ನವದೆಹಲಿ: ಜಿ-20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತಿತರ ದೇಶಗಳ ನಾಯಕರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿಯಲಿದ್ದಾರೆ. ಕೆಲ ರಾಷ್ಟ್ರಗಳ ನಾಯಕರು ಈಗಾಗಲೇ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ.
ಶೃಂಗಸಭೆ ಹಿನ್ನೆಲೆಯಲ್ಲಿ ನವದೆಹಲಿ ಭಿತ್ತಿಚಿತ್ರಗಳು, ಬ್ಯಾನರ್ ಗಳು, ಕಾರಂಜಿಗಳು ಮತ್ತು ಬೀದಿಯಲ್ಲಿ ಸಸ್ಯಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಪ್ರಧಾನ ಕಾರ್ಯಕ್ರಮ ಆಯೋಜಿಸಿರುವ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದ ಮುಂದೆ ನಟರಾಜನ ದೈತ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇಂದಿನಿಂದ ಮುಂದಿನ ಮೂರು ದಿನಗಳವರೆಗೆ ತುರ್ತು ಸೇವೆಗಳಿಗೆ ಹೊರತುಪಡಿಸಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: 'ನಮಸ್ಕಾರ, ಪವಿತ್ರ ಭೂಮಿ ಭಾರತಕ್ಕೆ ನಿಮಗೆ ಸ್ವಾಗತ': ಜಿ20 ಗಣ್ಯರನ್ನು ಭಾರತೀಯ ಶೈಲಿಯಲ್ಲಿ ಸ್ವಾಗತಿಸಲು ಸಚಿವರು ಸಜ್ಜು
ಶೃಂಗಸಭೆ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ವಿಶ್ವ ನಾಯಕರೊಂದಿಗೆ 15 ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಇಂದು ಅಮೆರಿಕಾ, ಮಾರಿಷಸ್, ಬಾಂಗ್ಲಾದೇಶ ಹಾಗೂ ಯುಎಸ್ ಎ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನಾಳೆ ಯುಕೆ, ಜಪಾನ್, ಜರ್ಮನಿ ಮತ್ತು ಇಟಲಿ ಮತ್ತು ನಾಡಿದ್ದು, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಭೋಜನಕೂಟದೊಂದಿಗೆ ಸಭೆಯನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ.
ಉಳಿದಂತೆ ಕೆನಡಾ, ಕೊಮೊರೊಸ್, ತುರ್ಕಿಯೆ, ಯುಎಇ, ದಕ್ಷಿಣ ಕೊರಿಯಾ, ಇಯು/ಇಸಿ, ಬ್ರೆಜಿಲ್ ಮತ್ತು ನೈಜೀರಿಯಾ ರಾಷ್ಟ್ರಗಳ ನಾಯಕರೊಂದಿಗೂ ಪ್ರಧಾನಿ ಮೋದಿ ದ್ವೀಪಕ್ಷೀಯ ಸಭೆ ನಡೆಸಲಿದ್ದು, ಹಲವು ಜಾಗತಿಕ ವಿಚಾರ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.