ದೇಶ

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಯುವಕನಿಗೆ ಆಮಿಷವೊಡ್ಡಿದ್ದ ಉತ್ತರ ಪ್ರದೇಶದ ದಂಪತಿ ಬಂಧನ

Ramyashree GN

ಶಾಮ್ಲಿ: ಉತ್ತರ ಪ್ರದೇಶದ ಶಾಮ್ಲಿಯ ಮದಲ್‌ಪುರ ಗ್ರಾಮದಲ್ಲಿ ಕ್ರಿಶ್ಚಿಯನ್ ಯುವಕನನ್ನು ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ದಂಪತಿಯನ್ನು ಶೌಕೀನ್ ಮತ್ತು ಅವರ ಪತ್ನಿ ಕಮರ್ಬತುನ್ ಎಂದು ಗುರುತಿಸಲಾಗಿದ್ದು, ಅವರು ಸದ್ಯ ದೆಹಲಿಯ ಓಖ್ಲಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಶಾಮ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮಾತನಾಡಿ, ಮದಲ್‌ಪುರ ಗ್ರಾಮದಲ್ಲಿ ಸೂರಜ್ ಎಂಬ ಯುವಕ ಮತ್ತು ಆತನ ಸ್ನೇಹಿತೆ ಮಹಿ ಎಂಬುವವರ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. 

ಅವರನ್ನು ವಿಚಾರಣೆಗಾಗಿ ಥಾನಭವನ್ ಪೊಲೀಸ್ ಠಾಣೆಗೆ ಕರೆತರಲಾಯಿತು ಮತ್ತು ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಕಮರ್ಬತುನ್‌, ಮಹಿ ಎಂಬ ಹೆಸರಿನಲ್ಲಿ ತನ್ನನ್ನು ತಾನು ಕ್ರಿಶ್ಚಿಯನ್ ಎಂದು ಪರಿಚಯಿಸಿಕೊಂಡಿದ್ದು, ಸೂರಜ್‌ಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಮನವೊಲಿಸಲು ಪ್ರಯತ್ನಿಸಿದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಎರಡು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಸೂರಜ್, ಆನ್‌ಲೈನ್ ಗೇಮ್ ಮೂಲಕ ಮಹಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿ ಆಕೆ ಕ್ರಿಶ್ಚಿಯನ್ ಎಂದು ಹೇಳಿಕೊಂಡು, ಇಬ್ಬರೂ ತಮ್ಮ ಜೀವನದಲ್ಲಿ ಅಲೌಕಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಪರಸ್ಪರ ಹತ್ತಿರವಾಗಿದ್ದರು. ಇಬ್ಬರೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಚಂಡೀಗಢದ ಕರಾಲಿ ಪ್ರದೇಶದಲ್ಲಿ ಪಾದ್ರಿಯನ್ನು ಭೇಟಿ ಮಾಡಿದರು.

ದೆಹಲಿಯ ಓಖ್ಲಾ ಪ್ರದೇಶದಲ್ಲಿ ತನ್ನ ಚಿಕ್ಕಪ್ಪ ಶೌಕೀನ್‌ನೊಂದಿಗೆ ವಾಸವಾಗಿರುವುದಾಗಿ ಮಹಿ ಸೂರಜ್‌ಗೆ ತಿಳಿಸಿದ್ದಾಳೆ ಮತ್ತು ಆತನನ್ನು ಅಲ್ಲಿಗೆ ಆಹ್ವಾನಿಸಿದ್ದಾಳೆ. ಆಕೆಯ ಆಧಾರ್ ಕಾರ್ಡ್ ಅನ್ನು ನೋಡಿದ ನಂತರ ಸೂರಜ್‌ಗೆ ಅನುಮಾನ ಬಂದಿದೆ. ಅದರಲ್ಲಿ ಆಕೆಯ ಹೆಸರು ಬಿಜ್ನೋರ್‌ನ ಜೋಗಿಪುರದ ಕಮರ್ಬತುನ್ ಎಂದು ನಮೂದಿಸಲಾಗಿತ್ತು.

ಆದಾಗ್ಯೂ, ಮಹಿ ತನ್ನ ತಾಯಿ ಕ್ರಿಶ್ಚಿಯನ್ ಮತ್ತು ಆಕೆಯ ತಂದೆ ಮುಸ್ಲಿಂ ಎಂದು ವಿವರಿಸುತ್ತಾ, ಆತನನ್ನು ನಂಬಿಸಿದ್ದಾಳೆ.
ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿ ಶೌಕೀನ್‌ನನ್ನು ತನಗೆ ಅಪರಿಚಿತ ವ್ಯಕ್ತಿಯಂತೆ ಪರಿಚಯಿಸಿದರು. ಆತ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳೆರಡೂ ಒಂದೇ ರೀತಿಯವು ಎಂದು ಮನವೊಲಿಸಲು ಪ್ರಯತ್ನಿಸಿದರು ಮತ್ತು ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದನ್ನು ಪರಿಗಣಿಸಬೇಕು ಎಂದು ಹೇಳಿದರು. 

ಈ ಮಧ್ಯೆ, ಮಹಿ ಮತ್ತು ಶೌಕೀನ್ ಅವರಿಗೆ ನಮಾಜ್ ಮಾಡುವ ಬಗ್ಗೆ ಸೂಚನೆ ನೀಡಿದರು ಮತ್ತು ಅವರ ಹೆಸರನ್ನು ಅಸದ್ ಎಂದು ಬದಲಾಯಿಸಲಾಯಿತು.

ಶೌಕೀನ್‌ನೊಂದಿಗಿನ ಮಹಿಯ ಸಂಬಂಧವು ವಿಚಾರಣೆಯ ಸಮಯದಲ್ಲಿ ಮಾತ್ರ ಬಹಿರಂಗವಾಯಿತು. ಅಲ್ಲಿಯವರೆಗೂ ಆಕೆ ಶೌಕೀನ್‌ನ ಹೆಂಡತಿ ಎಂದು ತಿಳಿದಿರಲಿಲ್ಲ. ಸೂರಜ್‌ನನ್ನು ವಂಚಿಸಲು ಮತ್ತು ಇಸ್ಲಾಂಗೆ ಮತಾಂತರಿಸಲು ದಂಪತಿ ಉದ್ದೇಶಪೂರ್ವಕವಾಗಿ ತಮ್ಮ ಸಂಬಂಧವನ್ನು ಮರೆಮಾಚಿದ್ದಾರೆ ಎಂದು ಇದು ಸ್ಪಷ್ಟಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

SCROLL FOR NEXT