ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ 
ದೇಶ

Patanjali Case: 'ನಾವೇನು ಕುರುಡರಲ್ಲ'; ಬಾಬಾ ರಾಮದೇವ್ 'ಬೇಷರತ್ ಕ್ಷಮೆ' ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸರ್ಕಾರಕ್ಕೂ ತರಾಟೆ

Srinivasamurthy VN

ನವದೆಹಲಿ: ಪತಂಜಲಿ ಸಂಸ್ಥೆಯ ಹಾದಿ ತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್ ದೇವ್ ಸುಪ್ರೀಂ ಕೋರ್ಟ್ ಮತ್ತೊಂದು ಶಾಕ್ ನೀಡಿದ್ದು, ರಾಮದೇವ್ ಸಲ್ಲಿಸಿದ್ದ 'ಬೇಷರತ್ ಕ್ಷಮೆ'ಯನ್ನು ತಿರಸ್ಕರಿಸಿ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದೆ.

ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ಸಲ್ಲಿಸಿದ ಮತ್ತೊಂದು ಕ್ಷಮೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ "ನಾವೇನೂ ಕುರುಡರಲ್ಲ".. ಈ ಪ್ರಕರಣದಲ್ಲಿ "ಉದಾರವಾಗಿರಲು ನಾವು ಬಯಸುವುದಿಲ್ಲ" ಎಂದು ಹೇಳಿ ಕ್ಷಮೆಯನ್ನು ತಿರಸ್ಕರಿಸಿದೆ.

ಅಲ್ಲದೆ ಈ ವಿಚಾರದಲ್ಲಿ ಸರ್ಕಾರದ ಉತ್ತರದಿಂದಲೂ ಸರ್ವೋಚ್ಛ ನ್ಯಾಯಾಲಯ ತೃಪ್ತವಾಗಿಲ್ಲ ಎಂದು ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

"ಕ್ಷಮಾಪಣೆಯು ಕಾಗದದ ಮೇಲಿದೆ. ಅವರ ಬೆನ್ನು ಗೋಡೆಗೆ ವಿರುದ್ಧವಾಗಿದೆ. ನಾವು ಇದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ, ನಾವು ಇದನ್ನು ಉದ್ದೇಶಪೂರ್ವಕ ಉಲ್ಲಂಘನೆ ಎಂದು ಪರಿಗಣಿಸುತ್ತೇವೆ" ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠ ಹೇಳಿದೆ.

ವಿಚಾರಣೆಯ ಆರಂಭದಲ್ಲಿ, ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ಮೊದಲು ಮಾಧ್ಯಮಗಳಲ್ಲಿ ಕ್ಷಮೆಯಾಚಿಸಿದರು ಎಂದು ಪೀಠವು ಗಮನಿಸಿದ್ದು, "ವಿಷಯವು ನ್ಯಾಯಾಲಯದ ಮೆಟ್ಟಿಲೇರುವವರೆಗೂ, ನಮಗೆ ಅಫಿಡವಿಟ್‌ಗಳನ್ನು ಕಳುಹಿಸದೇ ಇರುವುದು ಕಂಡುಬಂದಿದೆ. ಅವರು ಮೊದಲು ಮಾಧ್ಯಮಗಳಲ್ಲಿ ಕ್ಷಮೆ ಕೇಳಿದ್ದಾರೆ. ನಿನ್ನೆ ಸಂಜೆ 7.30 ರವರೆಗೆ ಅದನ್ನು ನಮಗೆ ಅಪ್‌ಲೋಡ್ ಮಾಡಿಲ್ಲ. ಇದು ಅವರ ಪ್ರಚಾರದ ಗಿಮಿಕ್ ಎಂಬುದು ಸ್ಪಷ್ಟವಾಗಿದೆ" ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದರು. .

ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ನೋಂದಾವಣಿ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಮತ್ತು ಕ್ಷಮೆ ಕೇಳಲಾಗಿದೆ ಎಂದು ಹೇಳಿದರು.

ಅಫಿಡವಿಟ್‌ಗಳನ್ನು ಓದುತ್ತಿದ್ದಂತೆ ನ್ಯಾಯಮೂರ್ತಿ ಅಮಾನುಲ್ಲಾ ಅವರು, "ನೀವು ಅಫಿಡವಿಟ್ ಅಲ್ಲಿಯೂ ವಂಚಿಸುತ್ತಿದ್ದೀರಿ, ಯಾರು ಈ ಅಫಿಡವಿಟ್ ಬರೆಗಿಿದ್ದು, ನಮಗೆ ಆಶ್ಚರ್ಯವಾಗಿದೆ". ಕ್ಷಮೆಯಾಚನೆಯು "ಹೃದಯಪೂರ್ವಕವಾಗಿದೆಯೇ" ಎಂದು ಕೇಳಿದರು.

"ಇನ್ನೇನು ಹೇಳಬೇಕು, ನನ್ನ ಪ್ರಭುಗಳೇ, ನೀವು ಹೇಳಿದಂತೆ ನಾವು ಮಾಡುತ್ತೇವೆ ಎಂದು ರೋಹ್ಟಗಿ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ "ನಮ್ಮ ಆದೇಶದ ನಂತರವೂ ನೀವು ಕ್ಷಮೆ ಕೇಳಿಲ್ಲ. ಈ ಪ್ರಕರಣದಲ್ಲಿ ನಾವು ತುಂಬಾ ಉದಾರವಾಗಿರಲು ಬಯಸುವುದಿಲ್ಲ. ಸಮಾಜಕ್ಕೆ ಒಂದು ಸಂದೇಶ ಹೋಗಬೇಕಾಗಿದೆ. ಇದು ಕೇವಲ ಒಂದು ಎಫ್‌ಎಂಸಿಜಿ ಸಂಸ್ಥೆಯ ಬಗ್ಗೆ ಅಲ್ಲ. ಆದರೆ ಗಂಭೀರವಾಗಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

SCROLL FOR NEXT