ದೇಶ

ಪ್ರಧಾನಿ ಮೋದಿ ಹೇಳಿಕೆಗೆ ವಿರೋಧ; ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮಾಜಿ ಮುಖ್ಯಸ್ಥರ ಬಂಧನ

ರಾಜಸ್ಥಾನದಲ್ಲಿ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ, ಶಾಂತಿಗೆ ಭಂಗ ತಂದ ಆರೋಪದ ಮೇಲೆ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪೊಲೀಸರು ಬಂಧಿಸಿದ್ದು, ಮೂರು ದಿನಗಳ ಹಿಂದಷ್ಟೇ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಜೈಪುರ: ರಾಜಸ್ಥಾನದಲ್ಲಿ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ, ಶಾಂತಿಗೆ ಭಂಗ ತಂದ ಆರೋಪದ ಮೇಲೆ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪೊಲೀಸರು ಬಂಧಿಸಿದ್ದು, ಮೂರು ದಿನಗಳ ಹಿಂದಷ್ಟೇ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಘನಿ ಅವರ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳೊಂದಿಗಿನ ವಾಗ್ವಾದವನ್ನು ಉಲ್ಲೇಖಿಸಿ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.

ಬಿಕಾನೇರ್ ನಗರದ ಮುಕ್ತಪ್ರಸಾದ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಮಾತನಾಡಿ, ಉಸ್ಮಾನ್ ಘನಿ ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಸಮಸ್ಯೆಯೊಂದನ್ನು ವರದಿ ಮಾಡಲು ಬಂದಿದ್ದರು. ಸಂವಾದದ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಯಿತು. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಿದರೂ, ಘನಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರು. ಇದುವೇ ಅವರ ಬಂಧನಕ್ಕೆ ಕಾರಣವಾಯಿತು ಎಂದರು.

ದೆಹಲಿಗೆ ಸಂಬಂಧಿಸಿದಂತೆ ದೂರದರ್ಶನಕ್ಕೆ ಹೇಳಿಕೆ ನೀಡುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸಿ ಘನಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದು ಗಮನಾರ್ಹವಾಗಿದೆ.

'ಈ ಹಿಂದೆ ಅವರು (ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ, ಅವರು ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕಿದೆ ಎಂದು ಹೇಳಿದ್ದರು. ಇದರರ್ಥ ಅವರು ಈ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ಒಳನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಬೇಕೇ? ನುಸುಳುಕೋರರಿಗೆ ಹಣ ನೀಡಬೇಕೆ, ಇದಕ್ಕೆ ನೀವು ಒಪ್ಪುತ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಪ್ರಧಾನಿ ಮೋದಿಯವರ ಈ ಮಾತುಗಳನ್ನು ಒಪ್ಪದ ಘನಿ, ಮುಸ್ಲಿಂ ಸಮುದಾಯದ ಬಗೆಗಿನ ಹೇಳಿಕೆಗಳಿಗೆ ಅಸಮ್ಮತಿ ವ್ಯಕ್ತಪಡಿಸಿದ್ದರು.

'ಬಿಜೆಪಿ ಕೇವಲ ನರೇಂದ್ರ ಮೋದಿಯವರ ಪಕ್ಷವಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 25 ಕ್ಷೇತ್ರಗಳಲ್ಲಿ 3 ರಿಂದ 4 ಸ್ಥಾನಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಚುರು ಮತ್ತು ಬಾರ್ಮರ್‌ನಲ್ಲಿ ತೀವ್ರ ಪೈಪೋಟಿ ಇದೆ' ಎಂದು ಅವರು ಹೇಳಿದ್ದರು.

'ನಮ್ಮಂತಹ ನೂರಾರು ಮುಸ್ಲಿಮರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ನಾವು ಮತಕ್ಕಾಗಿ ಸಾರ್ವಜನಿಕರನ್ನು ಸಂಪರ್ಕಿಸಿದಾಗ, ಮುಸ್ಲಿಮರು ನಮ್ಮ ನಿಲುವಿನ ಬಗ್ಗೆ ನಮ್ಮನ್ನು ಪ್ರಶ್ನಿಸುತ್ತಾರೆ. ನರೇಂದ್ರ ಮೋದಿಯವರ ವಾಕ್ಚಾತುರ್ಯವು ಸವಾಲುಗಳನ್ನು ಒಡ್ಡುತ್ತದೆ. ನಾನು ಅವರಿಗೆ ಪತ್ರ ಬರೆಯುವ ಬಗ್ಗೆ ಯೋಚಿಸುತ್ತಿದ್ದೇನೆ. ಅಂತಹ ಟೀಕೆಗಳಿಂದ ದೂರವಿರಲು ಒತ್ತಾಯಿಸುತ್ತೇನೆ' ಎಂದು ಘನಿ ತಿಳಿಸಿದ್ದರು.

ಘನಿಯವರ ಈ ಹೇಳಿಕೆಯನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಂತರ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತು. ಹೀಗಾಗಿ ಅವರ ಬಂಧನ ವಿವಿಧ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಲಖಾವತ್ ಅವರು ಏಪ್ರಿಲ್ 24 ರಂದು ಘನಿ ಅವರನ್ನು ಪಕ್ಷದಿಂದ (ಬಿಜೆಪಿ) ಆರು ವರ್ಷಗಳ ಕಾಲ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.

ಪಕ್ಷದ ವಕ್ತಾರ ಮನೀಶ್ ಸೋನಿ ಮಾತನಾಡಿ, 'ಸುದ್ದಿ ಚಾನೆಲ್‌ನಲ್ಲಿ ಬಿಜೆಪಿಯನ್ನು ಅಪಖ್ಯಾತಿ ಮಾಡುವ ಘನಿ ಅವರ ಪ್ರಯತ್ನವನ್ನು ಪಕ್ಷವು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿದೆ' ಎಂದು ಟೀಕಿಸಿದ್ದಾರೆ.

ಉಸ್ಮಾನ್ ಘನಿ 2005 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಹಿಂದೆ ಅವರು ಎಬಿವಿಪಿ ಕಾರ್ಯಕರ್ತರಾಗಿದ್ದರು. ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಜಿಲ್ಲಾ ಉಪಾಧ್ಯಕ್ಷರು ಸೇರಿದಂತೆ ಪಕ್ಷದೊಳಗೆ ವಿವಿಧ ಮಹತ್ವದ ಸ್ಥಾನಗಳನ್ನು ಹೊಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT