ಸಾಂದರ್ಭಿಕ ಚಿತ್ರ 
ದೇಶ

Insurance scam: 24 ಅಪಘಾತ ಮಾಡಿದ್ದ ಚಾಲಕನ ಬಂಧನ, ಬಹುದೊಡ್ಡ ವಿಮಾ ಹಗರಣ ಬಯಲಿಗೆ!

ಪ್ರಮುಖ ಆರೋಪಿ ಅಸ್ಲಂ ಮೊಹಮ್ಮದ್ ಚುಂಚಲಾ (Aslam Mohammad Chunchala) ಎಂಬಾತನನ್ನು ಪೊಲೀಸರು ಬಂಧಿಸಿ ಬಹುದೊಡ್ಡ ವಿಮಾ ಹಗರಣವನ್ನು ಬಯಲಿಗೆ ತಂದಿದ್ದಾರೆ.

ಅಹ್ಮದಾಬಾದ್: ಗುಜರಾತ್ ನಲ್ಲಿ ಬಹುದೊಡ್ಡ ವಿಮಾ ಹಗರಣವೊಂದು ಬೆಳಕಿಗೆ ಬಂದಿದ್ದು, ಬರೊಬ್ಬರಿ 24 ಅಪಘಾತ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು.. ಗುಜರಾತ್ ನ ಪಂಚಮಹಲ್, ದಾಹೋದ್ ಮತ್ತು ಮಹಿಸಾಗರ್ ಜಿಲ್ಲೆಗಳಲ್ಲಿ ನಡೆದಿದ್ದ ವಿವಿಧ ವಾಹನ ಅಪಘಾತ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಅಸ್ಲಂ ಮೊಹಮ್ಮದ್ ಚುಂಚಲಾ (Aslam Mohammad Chunchala) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಬಂಧನದ ಮೂಲಕ ಬಹುದೊಡ್ಡ ವಿಮಾ ಹಗರಣವೊಂದು ಬಯಲಿಗೆ ಬಂದಿದೆ.

ಗೋಧ್ರಾ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಪೊಲೀಸರು ಚಾಲಕ ಅಸ್ಲಂ ಮೊಹಮ್ಮದ್ ಚುಂಚಲಾನನ್ನು ವಿಚಾರಣೆಗೊಳಪಡಿಸಿದ್ದರು. ಈತನ ದಾಖಲೆ ಪರಿಶೀಲನೆ ನಡೆಸಿದಾಗ ಈತ ಹಾಲಿ ಪ್ರಕರಣದಲ್ಲಿ ಮಾತ್ರವಲ್ಲದೇ ಪಂಚಮಹಲ್, ದಾಹೋದ್ ಮತ್ತು ಮಹಿಸಾಗರ್ ಜಿಲ್ಲೆಗಳಲ್ಲಿ ನಡೆದಿದ್ದ ವಿವಿಧ ವಾಹನ ಅಪಘಾತ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಇನ್ನೂ ಅಚ್ಚರಿ ಎಂದರೆ ಈ ಎಲ್ಲ ಅಪಘಾತ ಪ್ರಕರಣಗಲ್ಲಿ ವಿಮಾ ಹಣ ಸಂತ್ರಸ್ತರಿಗೆ ಸಂದಿದೆ. ಹೀಗೆ ಸಂದಾಯವಾದ ಎಲ್ಲ ಪ್ರಕರಣಗಳಲ್ಲೂ ಈತನೇ ಚಾಲಕ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದು, ಮಾತ್ರವಲ್ಲದೇ ಇದು ಕೇವಲ ಅಪಘಾತ ಪ್ರಕರಣಗಳಷ್ಟೇ ಅಲ್ಲ... ಬದಲಿಗೆ ಬಹುದೊಡ್ಡ ವಿಮಾ ಹಗರಣ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ಏರಿಯಾ ಮ್ಯಾನೇಜರ್ ದಾಖಲಿಸಿದ್ದ ದೂರಿನ ಮೇರೆಗೆ ವಿಚಾರಣೆ

ಮೂಲಗಳ ಪ್ರಕಾರ ಗೋಧ್ರಾ ಪೊಲೀಸ್ ಠಾಣೆಯಲ್ಲಿ ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯ ಏರಿಯಾ ಮ್ಯಾನೇಜರ್ ಕಲ್ಪೇಶ್ ಪ್ರಜಾಪತಿ ಎಂಬುವವರು ದೂರು ದಾಖಲಿಸಿದ್ದರು. ದೂರಿನ ಪ್ರಕಾರ, 2016 ರಲ್ಲಿ, ಗೋಧ್ರಾ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಅಕ್ಟೋಬರ್ 2015 ರಲ್ಲಿ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದ್ದು, ಅಲ್ಲಿ ಹಕ್ಕುದಾರ ಜಗದೀಶ್ ಬರಿಯಾ 3 ಲಕ್ಷದ ಕ್ಲೈಮ್‌ಗೆ ಅರ್ಜಿ ಸಲ್ಲಿಸಿದ್ದರು.

ತನಿಖೆಯ ಸಮಯದಲ್ಲಿ, ವಿಮಾ ಕಂಪನಿಯು ಅಪಘಾತದ ವಿಷಯವನ್ನು ಪರಿಶೀಲಿಸಲು ಖಾಸಗಿ ಏಜೆನ್ಸಿಯನ್ನು ನೇಮಿಸಿಕೊಂಡಿತು ಮತ್ತು ಅಪಘಾತದಲ್ಲಿ ಚಾಲಕ ಎಂದು ಪಟ್ಟಿ ಮಾಡಲಾದ ವ್ಯಕ್ತಿ ಅಸ್ಲಂ ಚುಂಚ್ಲಾ ಎಂದು ತಿಳಿದುಬಂದಿದೆ. ಆದರೆ ಇದೇ ಅಸ್ಲಂ ಚುಂಚ್ಲಾ ಹಲವಾರು ಇತರ ಅಪಘಾತ ಪ್ರಕರಣಗಳಲ್ಲಿನ ಚಾಲಕರಾಗಿದ್ದ ವಿಚಾರ ಬೆಳಕಿಗೆ ಬಂದಿದೆ.

ಆರೋಪಿ ಅಸ್ಲಂ ಚುಂಚ್ಲ ಅಪಘಾತ ಪ್ರಕರಣಗಳಲ್ಲಿ ಚಾಲಕ ಎಂದು ತಪ್ಪಾಗಿ ಬಿಂಬಿಸಿಕೊಳ್ಳುವ ಮೂಲಕ ವಂಚನೆಯ ವಿಮಾ ಕ್ಲೈಮ್‌ಗಳನ್ನು ಸಲ್ಲಿಸುವಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ವಿಮಾ ಕಂಪನಿಯು ಮರು ತನಿಖೆ ನಡೆಸಿದಾಗ, ಚುಂಚ್ಲಾ ಅವರನ್ನು ಚಾಲಕ ಅಥವಾ ವಾಹನ ಮಾಲೀಕರಾಗಿ ಪಟ್ಟಿ ಮಾಡಲಾದ 24 ಇದೇ ರೀತಿಯ ವಂಚನೆ ಪ್ರಕರಣಗಳು ಬಹಿರಂಗಗೊಂಡವು.

ಚುಂಚ್ಲಾ, ವಾಹನ ಮಾಲೀಕ ಸಿಕಂದರ್ ಸಮದ್ ಅವರೊಂದಿಗೆ ಸೇರಿ ಅಪಘಾತದ ವಿವರಗಳನ್ನು ತಪ್ಪಾಗಿ ನಿರೂಪಿಸುವ ಮೂಲಕ ವಿಮಾ ಹಣವನ್ನು ಪಡೆಯಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚುಂಚಲಾ ಈ ವಿಮಾ ಸಂಚಿನ ಯೋಜನೆಯಲ್ಲಿ ಸ್ವಇಚ್ಛೆಯಿಂದ ಭಾಗವಹಿಸಿದ್ದಾರೋ ಅಥವಾ ತಪ್ಪಾಗಿ ಸಿಲುಕಿಸಲ್ಪಟ್ಟಿದ್ದಾರೋ ಎಂಬುದನ್ನು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಆದಾಗ್ಯೂ, ಈ ಘಟನೆಗಳಿಗೆ ಸಂಬಂಧಿಸಿದ ವೈದ್ಯಕೀಯ ವಿಮಾ ಕ್ಲೈಮ್‌ಗಳ ಮಾದರಿಯು ವಿಮಾ ಕಂಪನಿಗಳನ್ನು ಗಮನಾರ್ಹ ಪ್ರಮಾಣದಲ್ಲಿ ವಂಚಿಸಲು ಚೆನ್ನಾಗಿ ರೂಪಿಸಲಾದ ಪಿತೂರಿ ಎಂಬುದಂತೂ ಸ್ಪಷ್ಟವಾಗಿದ್ದು, ಸ್ವತಃ ಪೊಲೀಸರೇ ಆಘಾತಗೊಂಡಿದ್ದಾರೆ. ಇದೀಗ ಗೋಧ್ರಾ ಪೊಲೀಸ್ ಠಾಣೆಯಲ್ಲಿ ಈ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT