ದೇಶ

ನಾಳೆ ವಿಶ್ವಾಸ ಮತಯಾಚನೆ: ಜಾರ್ಖಂಡ್ ಶಾಸಕರು ಹೈದರಾಬಾದ್‌ನಿಂದ ರಾಂಚಿಗೆ ವಾಪಸ್

Lingaraj Badiger

ಹೈದರಾಬಾದ್‌: ಕಳೆದ ಮೂರು ದಿನಗಳಿಂದ ಹೈದರಾಬಾದ್‌ನ ರೆಸಾರ್ಟ್‌ನಲ್ಲಿ ತಂಗಿದ್ದ ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟದ ಶಾಸಕರು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೂ ಒಂದು ದಿನ ಮುಂಚಿತವಾಗಿ ಭಾನುವಾರ ರಾಂಚಿಗೆ ತೆರಳಿದ್ದಾರೆ.

ಹೊಸದಾಗಿ ರಚನೆಯಾದ ಚಂಪೈ ಸೋರೆನ್ ಸರ್ಕಾರವು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದೆ. ಪ್ರತಿಪಕ್ಷ ಬಿಜೆಪಿ ತಮ್ಮ ಶಾಸಕರನ್ನು ಖರೀದಿಸಬಹುದು ಎಂಬ ಆತಂಕದಿಂದ ಮೈತ್ರಿಕೂಟದ ಸುಮಾರು 40 ಶಾಸಕರು ಫೆಬ್ರವರಿ 2 ರಂದು ಎರಡು ವಿಮಾನಗಳಲ್ಲಿ ಹೈದರಾಬಾದ್‌ಗೆ ಆಗಮಿಸಿದ್ದರು. 

ಇಂದು ಸಂಜೆ  ಹೈದರಾಬಾದ್‌ನ ಶಂಶಾಬಾದ್‌ನಲ್ಲಿರುವ ಆರ್‌ಜಿಐ ವಿಮಾನ ನಿಲ್ದಾಣದಿಂದ ಎಲ್ಲಾ 40 ಶಾಸಕರು ರಾಂಚಿಗೆ ವಿಮಾನದ ಮೂಲಕ ತೆರಳಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಳೆದ ಮೂರು ದಿನಗಳ ಹಿಂದೆ ನಗರದ ಹೊರವಲಯದ ಶಾಮೀರ್‌ಪೇಟೆಯಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಶಾಸಕರಿಗೆ ವಸತಿ ಕಲ್ಪಿಸಲಾಗಿತ್ತು.

81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ 43 ಶಾಸಕರ ಬೆಂಬಲವನ್ನು ಹೊಂದಿದೆ. 43 ಶಾಸಕರ ಬೆಂಬಲವಿರುವ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ನಾಯಕ ಪ್ರಣವ್ ಝಾ ಆರೋಪಿಸಿದ್ದಾರೆ.

SCROLL FOR NEXT