ದೀಸಾ(ಗುಜರಾತ್): ನಮ್ಮ ಸರ್ಕಾರದ ಬಡವರ ಪರ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ದಲಿತರು, ಒಬಿಸಿಗಳು ಮತ್ತು ಬುಡಕಟ್ಟು ಸಮುದಾಯದವರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತಂದಿರುವುದು ತಮ್ಮ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಪ್ರತಿಪಾದಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ 1.3 ಲಕ್ಷ ಮನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ಯಾವುದೇ ಬಡ ವ್ಯಕ್ತಿಗೆ ಸ್ವಂತ ಮನೆ ಇದ್ದರೆ ಉತ್ತಮ ಭವಿಷ್ಯದ ಭರವಸೆ ಎಂದು ಹೇಳಿದರು.
1.3 ಲಕ್ಷ ಮನೆಗಳ ಅಂಕಿಅಂಶವನ್ನು ನೋಡಿ. ನಾನು ಪಿಎಂಎವೈ ಅಡಿಯಲ್ಲಿ ಮನೆ ನೀಡುವ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೂ, ನಾನು ಅಂತಹ ಬೃಹತ್ ಅಂಕಿಅಂಶವನ್ನು ನೋಡಿರಲಿಲ್ಲ. ನಾನು ಗುಜರಾತ್ ಸರ್ಕಾರವನ್ನು ಅಭಿನಂದಿಸುತ್ತೇನೆ. ಯಾವುದೇ ಬಡ ವ್ಯಕ್ತಿಗೆ ಸ್ವಂತ ಮನೆ ಇರುವುದು ಉತ್ತಮ ಭವಿಷ್ಯದ ಭರವಸೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಮುನ್ನ ಸಿಎಎ ಜಾರಿ, NDA 400ಕ್ಕೂ ಹೆಚ್ಚು ಸೀಟು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ: ಅಮಿತ್ ಶಾ
ತಮ್ಮ ಸರ್ಕಾರ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳನ್ನು ನಿರ್ಲಕ್ಷಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ, ನಮ್ಮ ಜನಪರ ಯೋಜನೆಗಳು ಬಡವರಿಗೆ ತಲುಪುತ್ತಿದೆ ಎಂದು ಹೇಳಿದ್ದು ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಅಭಿವೃದ್ಧಿ ಹೊಂದಿದ ಭಾರತದ ಆಧಾರ ಸ್ತಂಭಗಳು ಎಂದರು.
ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತರುವುದೇ ತಮ್ಮ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಪ್ರಧಾನಿ ಹೇಳಿದರು.