ರೈತರ ಪ್ರತಿಭಟನೆ ವೇಳೆ ಅಶ್ರುವಾಯು ಪ್ರಯೋಗ
ರೈತರ ಪ್ರತಿಭಟನೆ ವೇಳೆ ಅಶ್ರುವಾಯು ಪ್ರಯೋಗ  TNIE
ದೇಶ

ಪ್ರತಿಭಟನಾ ನಿರತ ರೈತ ಸಾವು: ದೆಹಲಿ ಚಲೋ ಮೆರವಣಿಗೆ 2 ದಿನ ಮುಂದೂಡಿಕೆ

Srinivas Rao BV

ನವದೆಹಲಿ: ಪ್ರತಿಭಟನಾ ನಿರತ ರೈತನೋರ್ವ ಮೃತಪಟ್ಟಿದ್ದು, ದೆಹಲಿ ಚಲೋ ಮೆರವಣಿಗೆಯನ್ನು 2ದಿನ ಮುಂದೂಡಿರುವುದಾಗಿ ರೈತ ನಾಯಕ ಸರ್ವನ್ ಸಿಂಗ್ ಪಂಧೇರ್ ಮಾಹಿತಿ ನೀಡಿದ್ದಾರೆ. ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಕಾರ್ಯದರ್ಶಿ ಆಗಿರುವ ಸರ್ವನ್ ಸಿಂಗ್ ಪಂಧೇರ್ ಎಸ್ ಕೆಎಂ ಹಾಗೂ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮುಂದಿನ 2 ದಿನಗಳ ಕಾಲ ದೆಹಲಿ ಚಲೋ ಮೆರವಣಿಗೆಯನ್ನು ಮುಂದೂಡಲು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.

ಖನೌರಿ ಗಡಿ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತ ಸಾವನ್ನಪ್ಪಿರುವ ಘಟನೆ ಹಾಗೂ ಇನ್ನಿತರ ಪರಿಸ್ಥಿತಿಗಳ ಬಗ್ಗೆ ರೈತರು ಚರ್ಚೆ ನಡೆಸಲಿದ್ದಾರೆ. ನಮ್ಮ ಮುಂದಿನ ನಡೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ, ಆ ನಂತರವಷ್ಟೇ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಶುಕ್ರವಾರ ಸಂಜೆಯೊಳಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಪಂಧೇರ್ ಹೇಳಿದ್ದಾರೆ. "ಈ ಮೆರವಣಿಗೆಯು ವಿಫಲವಾಗುವುದಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕು. ಇದು ಮೆರವಣಿಗೆಯಲ್ಲಿ ಜನರನ್ನು ಭೇದಿಸಲು ಪ್ರಯತ್ನಿಸುತ್ತಿದೆ ಮತ್ತು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ನಮ್ಮ ಯುವಕರನ್ನು ಪ್ರಚೋದಿಸಲು ಪ್ರಯತ್ನಿಸಿದ 4-5 ಸರ್ಕಾರಿ ನೌಕರರನ್ನು ನಾವು ಹಿಡಿದಿದ್ದೇವೆ" ಎಂದು ಅವರು ಹೇಳಿದರು. ರೈತನ ಹತ್ಯೆ ಮತ್ತು ಇತರರಿಗೆ ಗಾಯಗಳಾಗಿರುವುದನ್ನು ಖಂಡಿಸಿದ ಕಾರ್ಮಿಕ ಸಂಘಟನೆಗಳು ಫೆಬ್ರವರಿ 23 ರಂದು ದೇಶದಾದ್ಯಂತ ಕರಾಳ ದಿನವನ್ನಾಗಿ ಆಚರಿಸುವುದಾಗಿ ಹೇಳಿವೆ.

ಶಂಭು ಮತ್ತು ಖಾನೌರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಹರಿಯಾಣ ಪೊಲೀಸರು ರಬ್ಬರ್ ಬುಲೆಟ್ ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ ನಂತರ 21 ವರ್ಷದ ರೈತ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಆದರೆ ಹರ್ಯಾಣ ಪೊಲೀಸರು ಸಾವಿನ ಹೊಣೆಯನ್ನು ನಿರಾಕರಿಸಿದ್ದಾರೆ. ಶಂಭು ಮತ್ತು ಖಾನೌರಿ ಎರಡೂ ಗಡಿಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ. ಮೃತ ರೈತನನ್ನು ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ಶುಭ್ ಕರಣ್ ಸಿಂಗ್ ಎಂದು ಗುರುತಿಸಲಾಗಿದ್ದು, ತೀವ್ರ ಗಾಯಗೊಂಡ ಆತ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆತನ ಕಿವಿಯ ಮೇಲಿಂದ ತಲೆಗೆ ರಬ್ಬರ್ ಗುಂಡು ತಗುಲಿದೆ ಎನ್ನಲಾಗಿದೆ. ಗಾಯಗೊಂಡ 10 ರೈತರು ಆಸ್ಪತ್ರೆಗೆ ಧಾವಿಸಲಾಗಿದ್ದರೆ, ಇತರರು ಶಂಭುವಿನಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ.

ಏತನ್ಮಧ್ಯೆ, ರೈತರೊಂದಿಗೆ ಐದನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. "ನಾಲ್ಕನೇ ಸುತ್ತಿನ ನಂತರ ಎಲ್ಲಾ ವಿಷಯಗಳ ಬಗ್ಗೆ ಐದನೇ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧವಾಗಿದೆ. ಮಾತುಕತೆಯ ಮೂಲಕ ಮಾತ್ರ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ" ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಟ್ವೀಟ್ ಮಾಡಿದ್ದಾರೆ.

SCROLL FOR NEXT