ತೇಜಸ್ವಿ ಯಾದವ್
ತೇಜಸ್ವಿ ಯಾದವ್ 
ದೇಶ

‘17 ತಿಂಗಳಲ್ಲಿ ಐದು ಲಕ್ಷ ಉದ್ಯೋಗ ಕೊಟ್ಟಿದ್ದೇನೆ; ನನ್ನ ಗ್ಯಾರಂಟಿ ಕೆಲಸ ಮಾಡಿದೆ- ತೇಜಸ್ವಿ ಯಾದವ್

Nagaraja AB

ಪಾಟ್ನಾ: ಲೋಕಸಭೆ ಚುನಾವಣೆಗೆ ಮುನ್ನ ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್, ತಮ್ಮ ಪಕ್ಷವು ಉದ್ಯೋಗಗಳನ್ನು ಒದಗಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹೇಗೆ ಗರಿಷ್ಠ ಪ್ರಯತ್ನ ಮಾಡಿದೆ ಎಂಬುದನ್ನು ಎತ್ತಿ ತೋರಿಸುವ ಮೂಲಕ ಜನರ ಬೆಂಬಲವನ್ನು ಗಳಿಸಲು ಪ್ರಯತ್ನಿಸುತ್ತಿದ್ದಾರೆ.

ಗಯಾದಲ್ಲಿ 'ಜನ್ ವಿಶ್ವಾಸ್ ಯಾತ್ರೆ'ಯಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟಾರ್ಗೆಟ್ ಮಾಡುವುದರ ಜೊತೆಗೆ,ಪ್ರಧಾನಿ ನರೇಂದ್ರ ಮೋದಿಯವರ ಉದ್ಯೋಗ ನೀತಿ ಕುರಿತು ವಾಗ್ದಾಳಿ ನಡೆಸಿದರು. ರಾಜ್ಯದ ಗರಿಷ್ಠ ಸಂಖ್ಯೆಯ ಜನರನ್ನು ತಲುಪಲು ಅವರು ಇತ್ತೀಚಿಗೆ 'ಜನ್ ವಿಶ್ವಾಸ ಯಾತ್ರೆ' ಪ್ರಾರಂಭಿಸಿದ್ದರು.

“ಪ್ರಧಾನಿ ನರೇಂದ್ರ ಮೋದಿಯವರ ಎರಡು ಕೋಟಿ ಉದ್ಯೋಗಗಳ ಭರವಸೆ ವಿಫಲವಾಗಿದೆ. ಆದರೆ ನನ್ನ ಭರವಸೆ ಕೆಲಸ ಮಾಡಿದೆ. 2020ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದೆ.ಅವಕಾಶ ಸಿಕ್ಕಾಗ (ಉಪ ಮುಖ್ಯಮಂತ್ರಿಯಾಗಿ) 17 ತಿಂಗಳಲ್ಲಿ ಐದು ಲಕ್ಷ ಉದ್ಯೋಗ ನೀಡಿದ್ದೇನೆ. ನನ್ನ ವಯಸ್ಸಾದ 'ಚಾಚಾ' (ನಿತೀಶ್) ಅವರು ನಮ್ಮೊಂದಿಗೆ ಇನ್ನೂ ಸ್ವಲ್ಪ ಕಾಲ ಮುಂದುವರಿದಿದ್ದರೆ ನೀಡಿದ್ದ ಭರವಸೆಯನ್ನು ಪೂರೈಸುತ್ತಿದ್ದೆ ಎಂದು ಅವರು ಹೇಳಿದರು.

ಮಾರ್ಚ್ 3 ರಂದು ಪಾಟ್ನಾದಲ್ಲಿ ಆಯೋಜಿಸಲಾಗಿರುವ ಜನ ವಿಶ್ವಾಸ ಮಹಾ ರ್ಯಾಲಿಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರು ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಅದರಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

SCROLL FOR NEXT