ದೇಶ

ಮಹಾರಾಷ್ಟ್ರ: ಮಿಲಿಂದ್ ದಿಯೋರಾ ಶಿವಸೇನಾ ಸೇರುವುದಾದರೆ ಸ್ವಾಗತ: ಸಿಎಂ ಏಕನಾಥ್ ಶಿಂಧೆ

Nagaraja AB

ಮುಂಬೈ: ಇಂದು ಬೆಳಗ್ಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ಮಿಲಿಂದ್ ದಿಯೋರಾ, ಶಿವಸೇನಾ ಸೇರುವುದಾದರೆ ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ದಿಯೋರಾ ರಾಜೀನಾಮೆ ವಿಷಯ ಕೇಳಿದ್ದೇನೆ. ಅವರು ಒಂದು ವೇಳೆ ಶಿವಸೇನಾ ಸೇರುವುದಾದರೆ ಸ್ವಾಗತಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಶನಿವಾರ  ರಾಜೀನಾಮೆ ಊಹಾಪೋಹಗಳು ಕೇವಲ ವದಂತಿ ಎಂದಿದ್ದ ದಿಯೋರಾ, ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅದನ್ನು ದೃಢಪಡಿಸಿದ್ದಾರೆ ಮತ್ತು 'ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದರ ಮುಕ್ತಾಯವನ್ನು ಸೂಚಿಸುತ್ತದೆ. ನಾನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಈ ಮೂಲಕ ಪಕ್ಷದೊಂದಿಗಿನ ನಮ್ಮ ಕುಟುಂಬದ 55 ವರ್ಷಗಳ ಸಂಬಂಧ ಕೊನೆಗೊಂಡಿದೆ' ಎಂದಿದ್ದಾರೆ.

ಇತ್ತೀಚಿಗೆ ಕಾಂಗ್ರೆಸ್ ನಿಂದ ಅಸಮಾಧಾನಗೊಂಡಿರುವ ಮಿಲಿಂದ್ ದಿಯೋರಾ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರುವ ಸಾಧ್ಯತೆಯಿದೆ ಎಂದು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಊಹಾಪೋಹಗಳು ಹರಿದಾಡುತ್ತಿವೆ. ಇದೀಗ ಅವರ ರಾಜೀನಾಮೆ ಬೆನ್ನಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಸ್ವಾಗತಿಸುವ ಹೇಳಿಕೆ ನೀಡಿದ್ದು, ದಿಯೋರಾ ಅವರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ. 

SCROLL FOR NEXT