ದೇಶ

ಅಯೋಧ್ಯೆ: ಗರ್ಭಗುಡಿಗೆ ಶ್ರೀರಾಮನ ವಿಗ್ರಹ ಪ್ರವೇಶ; ಶಿಲ್ಪಿ ಮೈಸೂರು ಮೂಲದ ಅರುಣ್ ಯೋಗಿರಾಜ್

Sumana Upadhyaya

ಅಯೋಧ್ಯೆ (ಉತ್ತರ ಪ್ರದೇಶ): ಜನವರಿ 22 ರಂದು ನಡೆಯುವ ರಾಮ ಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿದ್ದು, ನಿನ್ನೆ ಬುಧವಾರ ಸಾಯಂಕಾಲ 51 ಇಂಚು ಎತ್ತರದ ರಾಮ್ ಲಲ್ಲಾನ ಹೊಸ ವಿಗ್ರಹವನ್ನು ರಾಮಮಂದಿರ ಆವರಣಕ್ಕೆ ತರಲಾಯಿತು.

ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ನೂತನ ವಿಗ್ರಹವನ್ನು ಇಂದು ಗುರುವಾರ ದೇವಾಲಯದ ಗರ್ಭಗೃಹದಲ್ಲಿ ಇರಿಸಲಾಗುವುದು ಎಂದು ಶ್ರೀ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

‘ಕೃಷ್ಣ ಶಿಲಾ’ (ಕಪ್ಪು ಕಲ್ಲು) ಮೇಲೆ ಕೆತ್ತಲಾದ ನೂತನ ವಿಗ್ರಹವನ್ನು ಕರಸೇವಕಪುರಂ ಬಳಿಯ ಕಾರ್ಯಾಗಾರದಿಂದ ಮುಚ್ಚಿದ ಟ್ರಕ್‌ನಲ್ಲಿ ಭಾರೀ ಭದ್ರತೆಯ ನಡುವೆ ದೇವಸ್ಥಾನದ ಆವರಣಕ್ಕೆ ತರಲಾಯಿತು. ಸುಮಾರು 150ರಿಂದ 200 ಕೆಜಿ ತೂಕದ ವಿಗ್ರಹವನ್ನು ದೇವಾಲಯದ ಒಳಗೆ ಸ್ಥಳಾಂತರಿಸಲು ಕ್ರೇನ್ ಬಳಸಲಾಯಿತು. ಹೊಸ ವಿಗ್ರಹದ ಆಗಮನದ ಮೊದಲು, ಟ್ರಸ್ಟ್ ಸದಸ್ಯರು ಮತ್ತು ಪ್ರಮುಖರಾದ ಅನಿಲ್ ಮಿಶ್ರಾ ಅವರಿಂದ ಎರಡನೇ ದಿನ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.

ನಿನ್ನೆ ಮಧ್ಯಾಹ್ನ 1.20 ರ ಸುಮಾರಿಗೆ ಜಲ ಯಾತ್ರೆಯೊಂದಿಗೆ ಆಚರಣೆಗಳು ಪ್ರಾರಂಭವಾದವು, ಇದರಲ್ಲಿ ಗರ್ಭಗುಡಿಯನ್ನು ಸ್ವಚ್ಛಗೊಳಿಸಲು ಸರಯು ನದಿಯ ನೀರನ್ನು ಬಳಸಲಾಯಿತು. ನಂತರ ತೀರ್ಥಪೂಜೆಯು ದೇವಾಲಯದ ಸ್ಥಳದಲ್ಲಿ ಹವನವನ್ನು ಮಾಡಲಾಯಿತು. ಬ್ರಾಹ್ಮಣ-ಬಟುಕ್-ಕುಮಾರಿ ಮತ್ತು ಸುವಾಸಿನಿ ಆಚರಣೆಯನ್ನು ಸಹ ಮಾಡಲಾಯಿತು, ನಂತರ ವರ್ಧಿನಿ ಪೂಜೆ ಮತ್ತು ಕಲಶ ಯಾತ್ರೆ ನಡೆಯಿತು. 121 ‘ಆಚಾರ್ಯರು’ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದಾರೆ.

ಅದಕ್ಕೂ ಹಿಂದಿನ ದಿನ, ಸುಮಾರು 500 ಮಹಿಳೆಯರು ಸರಯು ಘಾಟ್‌ನಿಂದ ರಾಮ ಮಂದಿರದವರೆಗೆ “ಜಲ ಕಲಶ ಯಾತ್ರೆ” ಯಲ್ಲಿ ಪಾಲ್ಗೊಂಡರು, ನದಿಯಿಂದ ನೀರನ್ನು ತಮ್ಮ ಕಲಶದಲ್ಲಿ ಸಾಗಿಸಿದರು.

ಅವರಲ್ಲಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬಿರ್ಜೇಶ್ ಪಾಠಕ್ ಅವರ ಪತ್ನಿ ನಮ್ರತಾ ಪಾಠಕ್, ಅಯೋಧ್ಯೆ ಮೇಯರ್ ಗಿರೀಶ್ ಪತಿ ತ್ರಿಪಾಠಿ ಅವರ ಪತ್ನಿ ರಾಮ್ ಲಕ್ಷ್ಮಿ ತ್ರಿಪಾಠಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೋಲಿ ಸಿಂಗ್ ಸೇರಿದ್ದಾರೆ.

SCROLL FOR NEXT