ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಗೃಹ ಸಚಿವಾಲಯ ಜಮ್ಮು-ಕಾಶ್ಮೀರ ಪುನರ್ವಿಂಗಡಣೆ ಕಾಯ್ದೆ, 2019 ಕ್ಕೆ ತಿದ್ದುಪಡಿ ತಂದಿದ್ದು ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರ ನೀಡಿದೆ.
ಈ ತಿದ್ದುಪಡಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದು ಅಧಿಸೂಚನೆ ಪ್ರಕಟವಾಗಿದೆ. ತಿದ್ದುಪಡಿಗಳು ಜುಲೈ 12 ರಂದು ಜಾರಿಗೆ ಬಂದಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ನಿರೀಕ್ಷೆಯಲ್ಲಿನ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೊಸ ತಿದ್ದುಪಡಿ ಕಾನೂನಿನ ಪ್ರಕಾರ 'ಪೊಲೀಸ್', 'ಸಾರ್ವಜನಿಕ ಆದೇಶ', 'ಅಖಿಲ ಭಾರತ ಸೇವೆ' ಮತ್ತು 'ಭ್ರಷ್ಟಾಚಾರ ನಿಗ್ರಹ ದಳ'ಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳನ್ನು ಲೆಫ್ಟಿನೆಂಟ್ ಗವರ್ನರ್ ವಿವೇಚನಾ ಅಧಿಕಾರ ಹೊಂದಿರುವ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದಕ್ಕೂ ಮೊದಲು, ಅಂತಿಮ ಅನುಮೋದನೆ ಅಥವಾ ನಿರಾಕರಣೆಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಲೆಫ್ಟಿನೆಂಟ್ ಗವರ್ನರ್ ಗೆ ಸಲ್ಲಿಸಬೇಕಿದೆ.
ಪ್ರಮುಖ ನಿಯಮಗಳಲ್ಲಿ, ನಿಯಮ 42 ರ ನಂತರ, ನಿಯಮ 42A ನ್ನು ಸೂಚಿಸುವ ಮೂಲಕ ಸೇರಿಸಲಾಗಿದ್ದು, ಇದರ ಪ್ರಕಾರ ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ನ್ಯಾಯಾಲಯದ ಕಲಾಪಗಳಲ್ಲಿ ಅಡ್ವೊಕೇಟ್-ಜನರಲ್ಗೆ ಸಹಾಯ ಮಾಡಲು ಅಡ್ವೊಕೇಟ್-ಜನರಲ್ ಮತ್ತು ಇತರ ಕಾನೂನು ಅಧಿಕಾರಿಗಳನ್ನು ನೇಮಿಸುವ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಮೂಲಕ ಲೆಫ್ಟಿನೆಂಟ್ ಗವರ್ನರ್ ಅನುಮೋದನೆಗಾಗಿ ಸಲ್ಲಿಸಬೇಕಿದೆ.
ಹೊಸದಾಗಿ ಸೇರಿಸಲಾದ ನಿಯಮ 42B ನಲ್ಲಿ, 'ಪ್ರಾಸಿಕ್ಯೂಷನ್ ಮಂಜೂರಾತಿಗೆ ಅನುಮತಿ ಅಥವಾ ನಿರಾಕರಣೆ ಅಥವಾ ಮೇಲ್ಮನವಿ ಸಲ್ಲಿಸುವ ಕುರಿತು ಯಾವುದೇ ಪ್ರಸ್ತಾವನೆಯನ್ನು ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಮುಖ್ಯ ಕಾರ್ಯದರ್ಶಿ ಮೂಲಕ ಲೆಫ್ಟಿನೆಂಟ್ ಗವರ್ನರ್ ಅವರ ಮುಂದೆ ಸಲ್ಲಿಸಬೇಕಾಗುತ್ತದೆ.
ಇದಷ್ಟೇ ಅಲ್ಲದೇ ಅಖಿಲ ಭಾರತ ಸೇವೆಗಳ ಅಧಿಕಾರಿಗಳ ಆಡಳಿತ ಕಾರ್ಯದರ್ಶಿಗಳು ಮತ್ತು ಕೇಡರ್ ಹುದ್ದೆಗಳ ಪೋಸ್ಟಿಂಗ್ ಮತ್ತು ವರ್ಗಾವಣೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ, ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಆಡಳಿತ ಕಾರ್ಯದರ್ಶಿ, ಸಾಮಾನ್ಯ ಆಡಳಿತ ಇಲಾಖೆ ಮುಖ್ಯ ಕಾರ್ಯದರ್ಶಿ ಮೂಲಕ ಸಲ್ಲಿಸಬೇಕಿರವುದು ಹೊಸ ಕಾನೂನಿನಲ್ಲಿ ಕಡ್ಡಾಯವಾಗಿರಲಿದೆ.
ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರ ನೀಡಿರುವುದನ್ನು ಟೀಕಿಸಿರುವ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗಳು ಹತ್ತಿರದಲ್ಲಿದೆ ಎಂಬುದಕ್ಕೆ ಮತ್ತೊಂದು ಸೂಚಕ ಇದಾಗಿದೆ. ಜಮ್ಮು-ಕಾಶ್ಮೀರದ ಜನರು ಶಕ್ತಿಹೀನ, ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿಗಿಂತ ಉತ್ತಮ ಸಿಎಂ ಪಡೆಯುವುದಕ್ಕೆ ಅರ್ಹರು. ಈಗಿನ ಕಾನೂನಿನ ಪ್ರಕಾರ ಜಮ್ಮು-ಕಾಶ್ಮೀರದ ಸಿಎಂ ತಮ್ಮ ಪ್ಯೂನ್ ನ್ನು ನೇಮಿಸಲು ಸಹ LG ಯ ಅನುಮೋದನೆಗಾಗಿ ಬೇಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.