ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು 46 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದೆ.
ಪುರಿ ಜಗನ್ನಾಥ ದೇಗುಲದಲ್ಲಿರುವ ರತ್ನ ಭಂಡಾರದಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಕ್ಯಾಟಲಾಗ್ ಅನ್ನು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದ್ದು, ಅದು ಅವುಗಳ ತೂಕ ಮತ್ತು ತಯಾರಿಕೆಯ ವಿವರಗಳನ್ನು ಹೊಂದಿರುತ್ತದೆ. ಅಲ್ಲದೆ ರತ್ನ ಭಂಡಾರ ದೀರ್ಘಕಾಲದಿಂದ ಮುಚ್ಚಿದ್ದರಿಂದ, ದುರಸ್ತಿ ಮಾಡುವ ಉದ್ದೇಶಕ್ಕಾಗಿ ಇಂದು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಭಂಡಾರವನ್ನು ತೆರೆಯಲಾಯಿತು ಎಂದು ಅವರು ಹೇಳಿದ್ದಾರೆ.
ಭಂಡಾರವನ್ನು ತೆರೆದಾಗ ಒರಿಸ್ಸಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ರಾತ್, ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಯ (ಎಸ್ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರವಿಂದ ಪಾಧಿ, ಎಎಸ್ಐ ಸೂಪರಿಂಟೆಂಡೆಂಟ್ ಡಿ.ಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜನ ಪ್ರತಿನಿಧಿ ಸೇರಿದಂತೆ 11 ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಪ್ರಭು ಜಗನ್ನಾಥರ ಇಚ್ಛೆಯಂತೆ, ಒಡಿಶಾ ಅಸ್ಮಿತೆಯೊಂದಿಗೆ ಒಡಿಯಾ ಸಮುದಾಯವು ಮುನ್ನಡೆಯುವ ಪ್ರಯತ್ನವನ್ನು ಆರಂಭಿಸಿದೆ. ಜಗನ್ನಾಥ ದೇಗುಲದ ನಾಲ್ಕು ದ್ವಾರಗಳನ್ನು ತೆರೆಯಲಾಯಿತು. ಇಂದು ನಿಮ್ಮ ಇಚ್ಛೆಯ ಮೇರೆಗೆ 46 ವರ್ಷಗಳ ನಂತರ ಒಂದು ಮಹತ್ತರ ಉದ್ದೇಶಕ್ಕಾಗಿ ರತ್ನ ಭಂಡಾರವನ್ನು ತೆರೆಯಲಾಯಿತು' ಎಂದು ಮುಖ್ಯಮಂತ್ರಿ ಕಚೇರಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.
ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 16 ಮಂದಿ ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಜುಲೈ 14ರಂದು ರತ್ನ ಭಂಡಾರವನ್ನು ಮತ್ತೆ ತೆರೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ‘ದೀರ್ಘಕಾಲದಿಂದ ಮುಚ್ಚಿದ್ದರಿಂದ, ಕೇವಲ ರಿಪೇರಿ ಮಾಡುವ ಉದ್ದೇಶಕ್ಕಾಗಿ ಮಾತ್ರ ತೆರೆಯಲಾಗುತ್ತಿದೆ’ ಎಂದು ಭಗವಾನ್ ಬಲಭದ್ರನ ಮುಖ್ಯ ಸೇವಕ ಹಾಲಧರ್ ದಸ್ಮೊಹಾಪಾತ್ರ ಸ್ಪಷ್ಟಪಡಿಸಿದ್ದರು. ಆಭರಣಗಳನ್ನು ತೂಕ ಮಾಡುವ ಬದಲಾಗಿ ಅವುಗಳನ್ನು ಲೆಕ್ಕಹಾಕಿ ಮತ್ತೆ ಸೀಲ್ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರು.
ರತ್ನಭಂಡಾರವು ಮೂರು ಭಾಗಗಳನ್ನು ಒಳಗೊಂಡಿದೆ. ಹೊರ ಕೋಣೆಯಲ್ಲಿ ಸಂಪ್ರದಾಯಕ್ಕೆ ಬಳಸುವ ಆಭರಣಗಳಿದ್ದು, ಒಳಭಾಗದಲ್ಲಿರುವ ಎರಡು ಕೋಣೆಗಳಲ್ಲಿ ಬಳಕೆಯಾಗದ ಆಭರಣಗಳು, ಶತಮಾನಗಳಿಂದ ರಾಜ ಕುಟುಂಬಗಳು, ಭಕ್ತರು ನೀಡಿದ ಆಭರಣ ಒಳಗೊಂಡಿದೆ ಎಂದು ದೇವಸ್ಥಾನದ ಹಿರಿಯ ಸೇವಕರೊಬ್ಬರು ತಿಳಿಸಿದ್ದರು. ಈ ಭಂಡಾರವನ್ನು 1978ರಲ್ಲಿ ಕೊನೆಯ ಬಾರಿ ತೆರೆಯಲಾಗಿತ್ತು.
3 SOP
ರತ್ನ ಭಂಡಾರ ತೆರೆಯುವ ಸಲುವಾಗಿ ಸಮಿತಿಯು ಸಂಪೂರ್ಣ ಪ್ರಕ್ರಿಯೆಗಾಗಿ ಮೂರು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOP ಗಳು) ಮಾಡಿತ್ತು. ಅದರಂತೆ ಒಂದು ರತ್ನ ಭಂಡಾರವನ್ನು ಪುನರಾರಂಭಿಸಲು ಸಂಬಂಧಿಸಿದ್ದಾಗಿದ್ದು, ಎರಡನೆಯದು ತಾತ್ಕಾಲಿಕ ರತ್ನ ಭಂಡಾರ ನಿರ್ವಹಣೆಗೆ ಸಂಬಂಧಿಸಿದ್ದಾಗಿದೆ ಮತ್ತು ಮೂರನೆಯದು ಬೆಲೆಬಾಳುವ ವಸ್ತುಗಳ ದಾಸ್ತಾನುಗಳಿಗೆ ಸಂಬಂಧಿಸಿದೆ. ಇಂದು ದಾಸ್ತಾನು ಕಾರ್ಯ ಪ್ರಾರಂಭವಾಗುವುದಿಲ್ಲ. ಮೌಲ್ಯಮಾಪಕರು, ಅಕ್ಕಸಾಲಿಗರು ಮತ್ತು ಇತರ ತಜ್ಞರ ಆಗಮನದ ಕುರಿತು ಸರ್ಕಾರದಿಂದ ಅನುಮೋದನೆ ಪಡೆದ ನಂತರ ಇದನ್ನು ಮಾಡಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರತ್ನಭಂಡಾರಕ್ಕೆ ಹಾವುಗಳ ಕಾವಲು!
ಇನ್ನು ರತ್ನಭಂಡಾರದಲ್ಲಿ ಹಾವುಗಳ ಇರುವಿಕೆ ಪತ್ತೆಯಾಗಿದ್ದು, ಇದೇ ಕಾರಣಕ್ಕಾಗಿ ಹಾವು ಹಿಡಿಯುವವರ ಎರಡು ತಂಡಗಳನ್ನು ದೇವಸ್ಥಾನಕ್ಕೆ ಕರೆಸಿಕೊಳ್ಳಲಾಗಿತ್ತು. ಸಮಿತಿಯ ಸದಸ್ಯರು ಖಜಾನೆಯೊಳಗೆ ಹೋಗುತ್ತಿದ್ದಂತೆ ಹಾವು ಹಿಡಿಯುವವರ ತಂಡ ಹಾವುಗಳನ್ನು ತೆರವುಗೊಳಿಸಿದ್ದಾರೆ.