ನವದೆಹಲಿ: ಈ ಬಾರಿ ಎನ್ ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಲೋಕಸಭೆ ಸ್ಪೀಕರ್ ಹುದ್ದೆ ಮೇಲೆ ಕಣ್ಣಿಟ್ಟಿರುವಂತೆಯೇ, ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕಿಂಜರಾಪು ರಾಮ್ ಮೋಹನ್ ನಾಯ್ಡು ಹಾಗೂ ಮಾಜಿ ಲೋಕಸಭಾ ಸ್ಪೀಕರ್ ಜಿಸಿ ಬಾಲಯೋಗಿ ಅವರ ಪುತ್ರ ಜಿಎಂ ಹರೀಶ್ ಮಧುರ್ ಮುಂಚೂಣಿಯಲ್ಲಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿದೆ.
ಮಾಜಿ ಕೇಂದ್ರ ಸಚಿವ, ಕಿಂಜರಾಪು ಯರ್ರಾನ್ ನಾಯ್ಡು ಅವರ ಪುತ್ರರಾಗಿರುವ ರಾಮ್ ಮೋಹನ್ ನಾಯ್ಡು ಅವರು ದೆಹಲಿ ಪಬ್ಲಿಕ್ ಸ್ಕೂಲ್, RK ಪುರಂನಲ್ಲಿ ಶಿಕ್ಷಣ ಪಡೆದಿದ್ದು, ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಮತ್ತು ಲಾಂಗ್ ಐಲ್ಯಾಂಡ್ ವಿಶ್ವವಿದ್ಯಾನಿಲಯದಿಂದ MBA ಪದವಿ ಪಡೆದಿದ್ದಾರೆ. ರಾಜಕೀಯ ವಲಯದಿಂದ ಸ್ನೇಹಿತರನ್ನು ಹೊಂದಿರುವ ಇವರು, ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ನಿರರ್ಗಳವಾಗಿ ಮಾತನಾಡುತ್ತಾರೆ. ರಾಮ್ ಮೋಹನ್ ನಾಯ್ಡು 2014ರಲ್ಲಿ 27ರ ಹರೆಯದಲ್ಲಿ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದ್ದರು
ಮತ್ತೊಬ್ಬ ಪ್ರಮುಖ ಸ್ಪರ್ಧಿ ಮಾಜಿ ಲೋಕಸಭಾ ಸ್ಪೀಕರ್ ಗಂಟಿ ಮೋಹನ ಚಂದ್ರ ಬಾಲಯೋಗಿ ಅವರ ಪುತ್ರ ಮತ್ತು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಜಿಎಂ ಹರೀಶ್ ಮಧುರ್. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ
ಟಿಡಿಪಿ ಬಾಲಯೋಗಿ ಅವರನ್ನು ಮೊದಲ ಲೋಕಸಭೆಯ ದಲಿತ ಸ್ಪೀಕರ್ ಮಾಡುವ ಶ್ರೇಯವನ್ನು ಪಡೆದುಕೊಂಡಿತು. ಬಾಲಯೋಗಿ ಅವರು ಮಾರ್ಚ್ 2002 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ಹರೀಶ್ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 40,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಐದು ವರ್ಷಗಳ ನಂತರ, ಟಿಡಿಪಿ ಮತ್ತು ಅದರ ಮಿತ್ರಪಕ್ಷಗಳ ಪ್ರಾಬಲ್ಯವಿರುವ ಚುನಾವಣೆಯಲ್ಲಿ ಅವರು 3.42 ಲಕ್ಷಕ್ಕೂ ಹೆಚ್ಚು ಅಂತರದಿಂದ ವಿಜೇತರಾಗಿದ್ದಾರೆ. ಹರೀಶ್ ಅವರನ್ನು ಆಯ್ಕೆ ಮಾಡುವ ಮೂಲಕ ದಶಕದ ನಂತರ ದಲಿತರನ್ನು ಸ್ಪೀಕರ್ ಆಗಿ ಮಾಡಿದ ಕೀರ್ತಿಯನ್ನು ಟಿಡಿಪಿ ಮತ್ತೊಮ್ಮೆ ಹೇಳಿಕೊಳ್ಳಬಹುದು. ಬಾಲಯೋಗಿ ನಂತರ ದಲಿತ ಸಮುದಾಯದಿಂದ ಮೀರಾ ಕುಮಾರ್ (2009-2014) ಒಬ್ಬರೇ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.